ಮಂಗಳೂರು: ಹಿರಿಯ ಲೇಖಕಿ, ಸಂಶೋಧಕಿ ಬಿ.ಎಂ. ರೋಹಿಣಿ ಅವರಿಗೆ "ವೀರರಾಣಿ ಅಬ್ಬಕ್ಕ ಪ್ರಶಸ್ತಿ', ಹಿರಿಯ ಚಲನಚಿತ್ರ ನಟಿ ಹರಿಣಿ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟು ಲಲಿತಾ ಜಯರಾಮ್ ಅವರಿಗೆ "ವೀರರಾಣಿ ಅಬ್ಬಕ್ಕ ಪುರಸ್ಕಾರ'ವನ್ನು ರವಿವಾರ ತೊಕ್ಕೊಟ್ಟು ಕಲ್ಲಾಪುವಿನಲ್ಲಿ ನಡೆದ ರಾಣಿ ಅಬ್ಬಕ್ಕ ಉತ್ಸವ -2016ರ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಬಿ.ಎಂ. ರೋಹಿಣಿ ಅವರು ಮಾತನಾಡಿ, ಅಬ್ಬಕ್ಕ ಈ ನಾಡಿನ ಸ್ವಾಭಿಮಾನದ ಸಂಕೇತ. ಆದರೆ, ಆಕೆಯ ಕುರಿತು ದಾಖಲೆಗಳು, ಸಂಶೋಧನೆಗಳು ಬಹಳ ಕಡಿಮೆಯಿದ್ದು, ಸರಕಾರ ಹೆಚ್ಚಿನ ಮುತುವರ್ಜಿ ವಹಿಸಿ ಪೋರ್ಚ್ಗಲ್ನಲ್ಲಿರುವ ಆಕ್ರೈವ್ನಲ್ಲಿ ಅಬ್ಬಕ್ಕನ ವಿಚಾರದಲ್ಲಿರುವ ದಾಖಲೆಗಳ ಸಂಶೋಧನೆಗೆ ಉತ್ತಮ ಸಂಶೋಧಕರನ್ನು ಕಳುಹಿಸಿ ಅಧ್ಯಯನ ನಡೆಸಲು ಪ್ರೋತ್ಸಾಹಿಸಬೇಕು. ಈ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸರಕಾರಕ್ಕೆ ಒತ್ತಡವನ್ನು ತರುವ ಕಾರ್ಯ ಮಾಡಬೇಕು ಎಂದರು.