ವಚನ ಸಾಹಿತ್ಯದ ಅಧ್ಯಯನಕ್ಕೆ ವಿಶಾಲ ಜ್ಞಾನ ಅವಶ್ಯ: ಡಾ| ಸಂಗಮೇಶ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮೇ.09: ಅಕ್ಷಯ ತೃತೀಯ ಫಲಪ್ರದ ಆಗುವ ನಂಬಿಕೆಯಾಗಿದೆ. ಇಂತಹ ಶುಭಾವಸರದಲ್ಲಿ ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿಗೆ ಬಂದು ನಿಮ್ಮೊಡನೆ ಹಂಚಿಕೊಳ್ಳುವುದು ಅಭಿನಂದನೀಯವಾಗಿದೆ. ನಾನು ವೃತ್ತಿ ನಿವೃತ್ತಿ ನಂತರ ಶರಣರ ಸಾಹಿತ್ಯ ಕೃಷಿಗೆ ಅರ್ಪಿಸಿರುವೆ. ವಚನಗಳ ಅಧ್ಯಯನಕ್ಕೆ ವಿಶಾಲವಾದ ಜ್ಞಾನ ಬೇಕಾಗುತ್ತದೆ. ಇಲ್ಲವಾದರೆ ಸೀಮಿತ ಕೋಶ ಮಾತ್ರ ಸಾಧ್ಯವಾಗುವುದು. ಬಸವಣ್ಣ ಕನ್ನಡ ನಾಡಿನಲ್ಲಿ ಜನಿಸಿದ್ದು ಸೌಭಾಗ್ಯ ಕನ್ನಡ ಪುಣ್ಯ. ಬಸವಣ್ಣನವರದು ವಿಶಾಲ ವ್ಯಕ್ತಿತ್ವ, ಪರಿಪೂರ್ಣ ವ್ಯಕ್ತಿತ್ವ, ಅವರ ಸಾಧನೆ ಬಹುಮುಖಿಯಾದುದು. ಬಸವಣ್ಣನವರ ಜೀವನ ಸಾಧನೆ ಬಹು ವಿಚಿತ್ರ ರೀತಿಯದ್ದಾಗಿತ್ತು. ಅವರು ಮಾನವಿಯ ಹಿನ್ನೆಲೆಯಲ್ಲಿ ಧರ್ಮದ ಚಿಂತನೆ ಮಾಡಿದವರು. ಮಾತು ಕೃತಿಗಳ ನಡುವೆ ಅಂತರವಿಲ್ಲದ ಮೌಲ್ಯಯುತವಾದ ಸಮಾಜವನ್ನು ಕಟ್ಟಿದವರು. ಬಸವಣ್ಣನವರು ಸನ್ಮಾರ್ಗ ದರ್ಶನವನ್ನು ತಮ್ಮ ವಿಚಾರ ಮೂಲಕ ಮಾಡಿಕೊಟ್ಟವರು. ಬಸವಣ್ಣನವರು ಜಂಗಮ ಮತ್ತು ಸ್ಥಾವರ ಎರಡಕ್ಕೂ ಆದ್ಯತೆ ನೀಡಿದವರು. ಬಸವಣ್ಣನವರು ಹೊಸ ಸಮಾಜವನ್ನು ಕಟ್ಟಿ ಬೆಳೆಸಿದವರು ಅವರು ಭೌತಿಕವಾಗಿ ಸೋತರು, ಮಾನಸಿಕವಾಗಿ ಗೆಲವು ಕಂಡವರು ಎಂದು ಬಸವಣ್ಣನವರ ಜೀವನ ಸಾಧನೆಯ ವಿವಿಧ ಮುಖಗಳನ್ನು ಎಂದು ಕನ್ನಡದ ಪ್ರಸಿದ್ಧ ಸಂಶೋಧಕ, ಭಾಷಾ ವಿಜ್ಞಾನಿ ಡಾ| ಸಂಗಮೇಶ ಸವದತ್ತಿಮಠ ತೆರೆದಿಟ್ಟರು.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಬಸವ ಜಯಂತಿಯ ನಿಮಿತ್ತ ಇಂದಿಲ್ಲಿ ಸೋಮವಾರ ಮಧ್ಯಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಕಲೀನಾ ಕ್ಯಾಂಪಸ್ನ ಮುಂಬಯಿ ವಿಶ್ವವಿದ್ಯಾಲಯದ ರಾನಡೆ ಭವನದಲ್ಲಿ ಅಯ್ಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನುದ್ದೇಶಿಸಿ ಡಾ| ಸಂಗಮೇಶ ಮಾತನಾಡಿ ನನ್ನ ಅರಿವಿನ ಚೌಕಟ್ಟನ್ನು ಮೀರಿ ಶ್ರಮಿಸಿ ಬಸವಣ್ಣರ ಶರಣ ಸಾಹಿತ್ಯದ ಕಡೆ ಒಲವು ತೋರಿದೆ. ಶರಣ ಪದಕೋಶದ ಹಿಂದಿನ ಅವಿರತ ಶ್ರಮ ಸಂತೃಪ್ತಿಯ ಫಲಾನುಭವ ನೀಡಿದೆ ಎಂದರು.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದ ಸವದತ್ತಿ ಮಠ ಅವರು ಬಸವಣ್ಣ ಅವರ ಜೀವನ ಸಾಧನೆಯ ಹಿನ್ನೆಲೆಯಲ್ಲಿ ಉಪನ್ಯಾಸ ನೀಡಿದರು.
ಜಿ.ಎನ್ ಉಪಾಧ್ಯರು ಪ್ರಸ್ತಾವಿಕ ನುಡಿಗಳನ್ನಾಡಿ ಬಸವೇಶ್ವರು ಹುಟ್ಟಿ ಅಕ್ಷಯ ತೃತೀಯಕ್ಕೆ ಮತ್ತಷ್ಟು ಮೆರಗು ಬಂದಂತಿದೆ. ಡಾ| ಸಂಗಮೇಶರು ಸರಳ ಮತ್ತು ವಿರಳ ವಿದ್ವಾಂಸರಲ್ಲಿ ಓರ್ವರು. ಕನ್ನಡದ ಹಿರಿಮೆ ಗರಿಮೆ ಜಾಗತಿಕವಾಗಿ ಪಸರಿಸಿದ ಹಿರಿಯ ಸಂಶೋಧಕರೂ ಹೌದು. ಸಾಮೂಹಿಕ ಹೋರಾಟ ಅವರದ್ದಾಗಿತ್ತು. ಸಮುದಾಯ ಹಿತಕ್ಕೆ ಶರಣರು ಶ್ರಮಿಸಿದರು. ವಚನ ಸಾಹಿತ್ಯ ಅಧ್ಯಯನಕ್ಕೆ ಡಾ| ಸಂಗಮೇಶ ಸವದತ್ತಿ ಮಠ ಅವರು ವರ್ಣನಾತ್ಮಕ ವಚನ ಪದಕೋಶದ ಮೂಲಕ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ಸಂಶೋಧನ ಲೋಕಕ್ಕೆ ಕಾಲಕಾಲಕ್ಕೆ ಮಾರ್ಗದರ್ಶನ ಮಾಡಿದ ಸಂಗಮೇಶ ಸವದತ್ತಿ ಮಠ ಅವರ ಸಾಧನೆ ಉಲ್ಲೇಖನೀಯವಾದುದು. ಭಾಷಾ ವಿಜ್ಞಾನಿ ಏನು ಮಾಡಬೇಕೆಂದು ತೋರ್ಪಡಿಸಿದ ನಿಷ್ಠಾವಂತ ವಿದ್ವಾಂಸರಿವರು. ಕನ್ನಡ ಸಂಶೋಧಕರಿಗೆ ದಿಶೆ ದಿಕ್ಕು ತೋರಿದ ವಾಮನ ಮೂರ್ತಿ ಇವರಾಗಿದ್ದು ಇವರ ಸಾಹಿತ್ಯ ಕೃಷಿಗೆ ಪಂಪ ಪ್ರಶಸ್ತಿ ಬರಲಿ ಎಂದು ಹಾರೈಸಿದರು.
ಶಕುಂತಳಾ ಎಸ್. ಸವದತ್ತಿಮಠ, ರೂಪ ವಸ್ಟ್ರದ, ಸ್ಮೀತಾ ಮಹೇಶ್, ಸಂಜಯ್ ವಸ್ಟ್ರದ್, ದಾಕ್ಷಾಯಣಿ ಯಡಹಳ್ಳಿ, ಕಿರಣ್ ರಾವ್ ಮತ್ತಿತರನೇಕರು ಉಪಸ್ಥಿತರಿದ್ದರು. ಸುಶೀಲಾ ಎಸ್.ದೇವಾಡಿಗ ಮತ್ತು ಶ್ಯಾಮಲಾ ಪ್ರಕಾಶ್ ಅವರು ವಚನ ಗಾಯನಗೈದರು. ದುಗ್ಗಪ್ಪ ಕೋಟೆವರ್ ಸ್ವಾಗತಿಸಿ ಡಾ| ಸಂಗಮೇಶ ಅವರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಎಂ.ಜಿ ಶಿವರಾಜ್ ವಂದಿಸಿದರು.