ಮಂಗಳೂರು: ಘನತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಯೋಜನೆಯನ್ನು ಮಂಗಳೂರು ಮಹಾನಗರ ಪಾಲಿಕೆ ಇನ್ನಷ್ಟು ವಿಸ್ತೃತಗೊಳಿಸಿದ್ದು, ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್ ಸಂಸ್ಥೆ (ಎಂಸಿಎಫ್) ಹಾಗೂ ಯುನಿಕ್ ವೇಸ್ಟ್ ಪ್ರೊಸೆಸಿಂಗ್ ಕಂಪೆನಿ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ.
ಮಂಗಳೂರಿನ ಘನತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರವಾಗಿ ಕೇಂದ್ರ ಸರಕಾರದ ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಹಾಗೂ ಸ್ವಚ್ಚ ಭಾರತ ಅಭಿಯಾನದ ನಿರ್ದೇಶಕ ಪ್ರವೀಣ್ ಪ್ರಕಾಶ್ ಅವರ ನಿರ್ದೇಶನದಂತೆ ಕಸದಿಂದ ಗೊಬ್ಬರ ತಯಾರಿಸುವ ಈ ವಿನೂತನ ಪ್ರಕ್ರಿಯೆಗೆ ಒಪ್ಪಿಗೆ ದೊರಕಿದೆ.ಪಾಲಿಕೆಯ ತ್ರಿಪಕ್ಷೀಯ ಒಡಂಬಡಿಕೆಗೆ ಮಂಗಳವಾರ ಸಹಿ ಹಾಕಲಾಗಿದ್ದು, ಮಂಗಳವಾರ ಸಂಬಂಧಪಟ್ಟ ಕಂಪೆನಿಗಳ ಪ್ರತಿನಿಧಿಗಳಿಗೆ ಒಡಂಬಡಿಕೆ ಕುರಿತು ಪತ್ರವನ್ನು ಮೇಯರ್ ಹರಿನಾಥ್ ಅವರು ಹಸ್ತಾಂತರಿಸಿದರು. ಈ ಸಂದರ್ಭ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಮುಹಮ್ಮದ್, ಆಯುಕ್ತ ಡಾ| ಎಚ್.ಎನ್. ಗೋಪಾಲಕೃಷ್ಣ ಉಪಸ್ಥಿತರಿದ್ದರು.