ಮುಂಬಯಿ, ಮೇ.17: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ , ಗೋಕುಲ ಸಯಾನ್, ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತ್ಯುತ್ಸವವನ್ನು ಬಿ. ಎಸ್ ಕೆ ಬಿ ಎಸೋಸಿಯೇಶನ್ ಮತ್ತು ಶ್ರೀ ಸುಬ್ರಹ್ಮಣ್ಯ ಸೇವಾ ಸಂಘದ ಸಹಭಾಗಿತ್ವದೊಂದಿಗೆ ಗೋಕುಲದಲ್ಲಿ ರವಿವಾರ ದಿನಾಂಕ 15.5.2016 ರಂದು ಸಂಭ್ರಮದಿಂದ ಆಚರಿಸಿತು.
ಶ್ರೀಕೃಷ್ಣ ಮಂದಿರದಲ್ಲಿ ಬೆಳಗಿನ ನಿತ್ಯಪೂಜೆ ಹಾಗೂ ಪ್ರಾರ್ಥನೆಯ ನಂತರ ಶ್ರೀ ಶಂಕರ ಭಗವತ್ಪಾದರ ಭಾವಚಿತ್ರವನ್ನು ಮಂದಿರದಿಂದ ಮೆರವಣಿಗೆಯೊಂದಿಗೆ ತಂದು ಅಲಂಕೃತ ಮಂಟಪದಲ್ಲಿ ಪ್ರತಿಷ್ಟಾಪಿಸಲಾಯಿತು. ಉಡುಪಿಯಿಂದ ಆಗಮಿಸಿದ ಬ್ರಹ್ಮಶ್ರೀ ವಾಗೀಶ ಶಾಸ್ತ್ರಿಯವರ ಪೌರೋಹಿತ್ವದಲ್ಲಿ ಪುಣ್ಯಾಹ ವಾಚನ, ಪಂಚಗವ್ಯ, ಗಣ ಹೋಮ, ಆಯುಷ್ಯಕರ ತ್ರ್ಯಯಂಬಕ ಹವನ, ರುದ್ರಾಭಿಷೇಕ, ಶಂಕರಾಚಾರ್ಯರ ಪೂಜೆ ಮತ್ತು ನಾಮಾರ್ಚನೆ ಮುಂತಾದ ಧಾರ್ಮಿಕ ವಿಧಿಗಳು, ವೇದಮೂರ್ತಿ ನಾಗಭೂಷಣ ಶಾಸ್ತ್ರಿ, ಉಡುಪಿ, ನಾಗೇಶ್ ರಾವ್, ಪನ್ವೇಲ್ ಹಾಗೂ ಮಂದಿರದ ಅರ್ಚಕರಾದ ಶ್ರೀ ಹರಿ ಭಟ್ ರವರ ಸಹಯೋಗದಿಂದ ಸಾಂಗವಾಗಿ ನೆರವೇರಿತು. ಧಾರ್ಮಿಕ ವಿಧಿಗಳ ಕರ್ತೃಗಳಾಗಿ ಪಿ. ರಾಧಾಕೃಷ್ಣ ರಾವ್ ಮತ್ತು ಉಷಾ ರಾವ್, ರಾಜೇಶ್ ರಾವ್ ಮತ್ತು ವಿನೋದಿನಿ ರಾವ್, ರತ್ನಾಕರ್ ರಾವ್ ಮತ್ತು ರಮಾ ರಾವ್, ಬಾಲಚಂದ್ರ ರಾವ್ ಮತ್ತು ಪ್ರಭಾವತಿ ರಾವ್ ದಂಪತಿಗಳು ಪಾಲ್ಗೊಂಡಿದ್ದರು. ಗೋಕುಲ ಕಲಾವೃಂದ ಭಜನಾ ಮಂಡಳಿಯಿಂದ ಆದಿ ಶಂಕರಾಚಾರ್ಯ ವಿರಚಿತ ಸ್ತೋತ್ರಗಳು ಹಾಗೂ ಭಜನೆ ಜರಗಿತು. ಹವನದ ಪೂರ್ಣಾಹುತಿಯಾದ ನಂತರ ನಡೆದ ಅಷ್ಟಾವಧಾನ ಸೇವೆಯಲ್ಲಿ ಪುರೋಹಿತ ವರ್ಗ ಹಾಗೂ ವೇದಮೂರ್ತಿ ಸುಬ್ರಹ್ಮಣ್ಯ ಐತಾಳ್ ರವರಿಂದ ವೇದ ಘೋಷ, ಇಂದ್ರಾಣಿ ರಾವ್ ಸಂಗೀತ, ಕುಮಾರಿ ಅನನ್ಯ ಐತಾಳ್ ರವರಿಂದ ನೃತ್ಯ ಸೇವೆ ಜರಗಿತು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ವಾಗೀಶ ಶಾಸ್ತ್ರಿಗಳು ತಮ್ಮ ಉಪನ್ಯಾಸದಲ್ಲಿ ಜಗದ್ಗುರುಗಳ ಜೀವನ ಚರಿತ್ರೆ ಹಾಗೂ ಅವರು ಸರಳ ಸುಂದರ ಸಂಸ್ಕೃತ ಭಾಷೆಯಲ್ಲಿ ರಚಿಸಿದ ಸ್ತೋತ್ರಗಳ ಬಗ್ಗೆ ವಿಸ್ತಾರವಾಗಿ ತಿಳಿ ಹೇಳುತ್ತಾ ನಿತ್ಯವೂ ಅವುಗಳ ಪಠನೆ ಮಾಡಬೇಕು ಎಂದು ಹೇಳಿದರು. ನಂತರ ತೀರ್ಥ ಪ್ರಸಾದ ವಿತರಣೆ ಹಾಗೂ ಪ್ರಸಾದ ಭೋಜನ ನೆರವೇರಿತು.