ಮಂಗಳೂರು: ನೇತ್ರಾವತಿ ಹೋರಾಟಗಾರರು ಮೇ ೧೯ರಂದು ಕರೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಹಿಂಪಡೆದುಕೊಳ್ಳುವ ಬಗ್ಗೆ ದ.ಕ.ಜಿಲ್ಲಾಧಿಕಾರಿ ಅವರ ಸಂಧಾನಸಭೆ ವಿಫಲಗೊಂಡಿದ್ದು, ಬಂದ್ ಖಚಿತವಾಗಿದೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನೇತೃತ್ವದಲ್ಲಿ ಹೋರಾಟಗಾರರ ಹಾಗೂ ಅಧಿಕಾರಿಗಳ ಸಭೆ ನಡೆಯಿತು. ಈ ವೇಳೆ ನೇತ್ರಾವತಿ ಸಂಯುಕ್ತ ರಕ್ಷಣಾ ಸಮಿತಿ ಪರವಾಗಿ ವಿಜಯ್ ಕುಮಾರ್ ಶೆಟ್ಟಿ, ಸಂಚಾಲಕರಾದ ಹರಿಕೃಷ್ಣ ಬಂಟ್ವಾಳ, ಸತ್ಯಜಿತ್ ಸುರತ್ಕಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೇ. ೧೯ರಂದು ನಡೆಯುವ ಬಂದ್ ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದು.
ಈ ಮೊದಲು ನಡೆದ ಹೋರಾಟದಲ್ಲಿ ಯಾವುದೇ ಗಲಭೆಯಾಗಿಲ್ಲ. ಜಿಲ್ಲಾಡಳಿತಕ್ಕೆ ಈ ಬಗ್ಗೆ ಅನುಮಾನ ಬೇಡ ಎಂದು ಅವರು ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ಬಂದ್ ನಿಂದ ಯಾವುದೇ ಪರಿಹಾರ ನಿರೀಕ್ಷಿಸುವಂತಿಲ್ಲ. ಇದರಿಂದಾಗಿ ೧೯ರ ಬಂದ್ ವಿಚಾರದ ಬಗ್ಗೆ ಪುನರ್ ವಿಮರ್ಶಿಸಬೇಕು.ಅಲ್ಲದೆ, ಈ ಯೋಜನೆ ೯೦ರ ದಶಕದಲ್ಲೆ ಪ್ರಸ್ತಾವಿತ ಯೋಜನೆ. ೨೦೧೦ರ ನಂತರ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಈ ಯೋಜನೆಗೆ ಬದ್ಧವಾಗಿದೆ ಎಂದರು. ಜಿಲ್ಲಾಧಿಕಾರಿಯವರು ಸಂಧಾನ ನಡೆಸಿದರೂ ಹೋರಾಟಗಾರರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹಾಗಾಗಿ ಮೇ ೧೯ರಂದು ನಡೆಯಲಿರುವ ಬಂದ್ ಖಚಿತಗೊಂಡಿದೆ. ಸಭೆಯಲ್ಲಿ ಪೊಲೀಸ್ ಆಯುಕ್ತ ಚಂದ್ರಶೇಖರ್, ಎಡಿಸಿ ಕುಮಾರ್, ಎಸ್ಪಿ ಶರಣಪ್ಪ ಮೊದಲಾದವರು ಉಪಸ್ಥಿತರಿದ್ದರು.