ಮಂಗಳೂರು: ರೌಡಿಶೀಟರ್ ಆಗಿರುವ ನಿಟ್ಟೆ ಅತ್ತೂರು ಚರ್ಚ್ ಬಳಿಯ ದರ್ಬುಜೆ ಮನೆಯ ವಿಲಿಯಂ ಡಿಸೋಜಾ ಅಲಿಯಾಸ್ ವುಲ್ಲಿ(43) ಎಂಬಾತನನ್ನು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ರಫೀಕ್ ನೇತೃತ್ವದ ತಂಡ ಬಂಧಿಸಿದ್ದಾರೆ. ಬಂಧಿತನಿಂದ 40 ಸಜೀವ ಗುಂಡುಗಳು, ಎರಡು ಚಾಕುಗಳನ್ನು ಇದೇ ಸಂದರ್ಭದಲ್ಲಿ ವಶಪಡಿಸಲಾಗಿದೆ.ಭೂಗತ ರೌಡಿ ಕೊರಗ ವಿಶ್ವನಾಥ ಶೆಟ್ಟಿಯ ಸಹಚರನಾಗಿರುವ ವಿಲಿಯಂ ಡಿಸೋಜಾ ಉಡುಪಿ ಜಿಲ್ಲಾ ಸರಹದ್ದಿನಲ್ಲಿ ಹಾಗೂ ಮುಂಬಯಿಯಲ್ಲಿ ಹಲವು ಕುಕೃತ್ಯ ಎಸಗಿದ್ದು ಮನೆಯಲ್ಲಿ ಮಲ್ಲಿಗೆ ಕೃಷಿ ಮಾಡಿಕೊಂಡು ತಾನೊಬ್ಬ ಸಾಚ ವ್ಯಕ್ತಿಯಂತೆ ಫೋಸ್ ನೀಡುತ್ತಿದ್ದನೆಂಬ ಮಾಹಿತಿ ಲಭಿಸಿದೆ. ಚಾಕುಗಳನ್ನು ತನ್ನ ಪ್ಯಾಂಟ್ನಲ್ಲಿ ಸಿಲುಕಿಸಿ ಇಡುವಂತಹ ವ್ಯವಸ್ಥೆಯನ್ನು ಮಾಡಿಕೊಂಡು ಪ್ರತಿದಿನ ತಿರುಗುತ್ತಾ ಕುಕೃತ್ಯ ನಡೆಸುತ್ತಿದ್ದನೆಂದು ತಿಳಿದುಬಂದಿದೆ.
ಹಿಂಸೆ ಕೊಡುವುದು, ಹುಡುಗಿಯರನ್ನು ಛೇಡಿಸುವುದು,ಕೋಮುಗಲಭೆ ಮಾಡುವುದು, ಕಳ್ಳಭಟ್ಟಿ ಮಾರಾಟ, ಕುಡಿತ, ಗ್ಯಾಂಗ್ ಸೇರಿ ಬೆದರಿಕೆ, ಹಲ್ಲೆ ಮಾಡುವುದು, ಕಳ್ಳ ಸಾಗಾಣಿಕೆದಾರರನ್ನು ರಕ್ಷಿಸುವುದು, ಕಳ್ಳರು ಮತ್ತು ಜೇಬುಗಳ್ಳರು ಮುಂತಾದವರನ್ನು ರಕ್ಷಿಸುವಂತಹ ಪುಂಡರ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಈತನ ಮೇಲಿದೆ.