ಮಂಗಳೂರು: "ಕಾಂಗ್ರೆಸ್ನವರು ದೇಶ ಹಾಳು ಮಾಡುತ್ತಿದ್ದಾರೆ. ಆದ್ದರಿಂದ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ' ಎಂಬ ಮಾತಿಗೆ ಪೂರಕವಾಗಿ ಇತ್ತೀಚೆಗೆ ನಡೆದ 5 ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಫಲಿತಾಂಶ ಬಂದಿದೆ ಎಂಬ ಬಿಜೆಪಿಯವರ ಮಾತಿಗೆ ಅರ್ಥವಿಲ್ಲ. ಇಲ್ಲಿ ಕಾಂಗ್ರೆಸ್ ಮುಕ್ತವಾಗಿಲ್ಲ; ಬಿಜೆಪಿ ಮುಕ್ತವಾಗುವ ಫಲಿತಾಂಶ ಬಂದಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಸಾಂನಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೂ ಅಲ್ಲಿ ಕಾಂಗ್ರೆಸಿಗೆ ಶೇ. 31ರಷ್ಟು ಮತಗಳು ಲಭಿಸಿವೆ. ಬಿಜೆಪಿಗೆ ಸಿಕ್ಕಿದ್ದು ಶೇ. 29.5ರಷ್ಟು ಮಾತ್ರ. ತಮಿಳುನಾಡಿನಲ್ಲಿ ಬಿಜೆಪಿಗೆ ಒಂದು ಸ್ಥಾನವೂ ಸಿಕ್ಕಿಲ್ಲ. ಅಲ್ಲಿ ಕಾಂಗ್ರೆಸ್ 2 ನೇ ಸ್ಥಾನದಲ್ಲಿದೆ.
ಕೇರಳದಲ್ಲಿ ಬಿಜೆಪಿಗೆ ಕೇವಲ ಒಂದು ಸ್ಥಾನ ಹಾಗೂ ಕಾಂಗ್ರೆಸ್ಗೆ 22 ಸ್ಥಾನ ಲಭಿಸಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಕೇವಲ 3 ಸ್ಥಾನ, ಕಾಂಗ್ರೆಸ್ಗೆ 44 ಸ್ಥಾನ ಲಭಿಸಿವೆ. ಪಾಂಡಿಚೇರಿಯಲ್ಲಿ ಬಿಜೆಪಿಗೆ ಒಂದು ಸ್ಥಾನವೂ ಬಂದಿಲ್ಲ. ಹಾಗಾಗಿ ಇದು ಬಿಜೆಪಿಯನ್ನು ಮುಕ್ತಗೊಳಿಸುವ ಫಲಿತಾಂಶ ಎಂದು ವಿಶ್ಲೇಷಿಸಿದರು.ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಸ್ವಪಕ್ಷೀಯರಿಂದಲೇ ಅವರಿಗೆ ಗೌರವ ಸಿಗುತ್ತಿಲ್ಲ ಎಂದು ಅವರು ಟೀಕಿಸಿದರು.