ಮಂಗಳೂರು: ಪ್ರಸ್ತುತ ಮಂಗಳೂರಿಗೆ ನೀರು ಒದಗಿಸುವ ತುಂಬೆ ಡ್ಯಾಂನಲ್ಲಿ ನೀರಿನ ಒಳಹರಿವು ಎರಡು ದಿನಗಳಿಂದ ಏರಿಕೆ ಆಗುತ್ತಿದೆ. ನೀರಿನ ಮಟ್ಟ 6 ಅಡಿಗೆ ಏರಿದರೆ ಮುಂದೆ 2 ದಿನಕ್ಕೊಮ್ಮೆ ಮಂಗಳೂರಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಮಂಗಳೂರು ಮೇಯರ್ ಎಂ. ಹರಿನಾಥ್ ತಿಳಿಸಿದ್ದಾರೆ.ತುಂಬೆ ಡ್ಯಾಂ ಹಾಗೂ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿ ನೇತ್ರಾವತಿ ನದಿಯ ಭಾಗಕ್ಕೆ ಶನಿವಾರ ಭೇಟಿ ನೀಡಿ, ನೀರಿನ ಒಳಹರಿವಿನ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚಿಸಿ ಅವರು ಮಾದ್ಯಮದ ಜೊತೆ ಮಾತನಾಡಿದರು.
ತುಂಬೆ ಡ್ಯಾಂನ ಗರಿಷ್ಠ ಮಟ್ಟ 13 ಅಡಿ ಆಗಿದ್ದು, ಕಳೆದ ವರ್ಷ ಇದೇ ಸಂದರ್ಭ 12 ಅಡಿಯಷ್ಟು ನೀರಿತ್ತು. ಆದರೆ ಈಗ 4.5 ಅಡಿಯಷ್ಟು ಮಾತ್ರ ನೀರಿರುವುದರಿಂದ 3 ದಿನಕ್ಕೊಮ್ಮೆ ನೀರು ಒದಗಿಸಲಾಗುತ್ತಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಳೆಯಾದ ಕಾರಣ ಹಾಗೂ ನೆಕ್ಕಿಲಾಡಿ ಡ್ಯಾಂನ ನೀರು ತುಂಬೆ ತಲುಪುತ್ತಿರುವ ಕಾರಣದಿಂದ ನೀರಿನ ಒಳಹರಿವು ಈಗ ಏರಿಕೆಯಾಗುತ್ತಿದೆ. 9 ಅಡಿ ವರೆಗೆ ನೀರು ಸಂಗ್ರಹವಾದರೆ ಪ್ರತೀದಿನ ನೀರು ಸರಬರಾಜು ಮಾಡುವ ಬಗ್ಗೆಯೂ ಯೋಚಿಸಲಾಗುವುದು ಎಂದರು.