(ಅರಸಿನ ಕುಂಕುಮ ಧಾರ್ಮಿಕ ಸಭಾ ಕಾರ್ಯಕ್ರಮ)
ಕುಂದಾಪುರ: ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಬೇಕಾದ ಹೊಣೆ ಮಾತೆಯರಿಗೆ ಸೇರಿದೆ. ಅವರು ಆ ಕೆಲಸಕ್ಕೆ ಮುಂದಾದರೆ ಮಾತ್ರ ದೇಶ ಸುಸಂಸ್ಕøತ ಪ್ರಜೆಗಳನ್ನು ಹೊಂದಲು ಸಾಧ್ಯವೆಂದು ಎಳ್ಜಿತ ಸಿದ್ಧಿವಿನಾಯಕ ಸಾಂಸ್ಕ್ರತಿಕ ಕೇಂದ್ರದ ಸಂಚಾಲಕ ವೈ. ಮಂಗೇಶ್ ಶೆಣೈ ಹೇಳಿದರು.
ಖಂಬದಕೋಣೆ ಮಾಣಿಕ್ಯನಾಗ ಸನ್ನಿಧಿಯ 14ನೇ ವಾರ್ಷಿಕೋತ್ಸವದ ನಿಮಿತ್ತ ಗುರುವಾರ ನಡೆದ `ಅರಸಿನ ಕುಂಕುಮ' ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಭಾರತೀಯ ಪರಂಪರೆಯಲ್ಲಿ ಎಲ್ಲಾ ಮಹಿಳೆಯರಿಗೆ ಎಲ್ಲಾ ಕಾಲದಲ್ಲಿ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುವ ಅವಕಾಶವಿತ್ತು. ಅದಕ್ಕೆ ಹಲವು ನಿದರ್ಶನಗಳು ದೊರೆಯುತ್ತವೆ. ಆದರೆ ಯಾವುದೋ ಒಂದು ಹಂತದಲ್ಲಿ ನಿರ್ಧಿಷ್ಟ ಸಂದರ್ಪಗಳಲ್ಲಿ ಅವರನ್ನು ದೂರವಿಡುವ ಪದ್ದತಿ ಆರಂಭವಾಯಿತು. ಅದಕ್ಕೆ ಅಂತ್ಯಕಾಣಬೇಕಾದ ಕಾಲ ಬಂದಿದೆ ಎಂದು ಅವರು ನುಡಿದರು.
ಹಾಗೆ ಮುಂದುವರಿಸಿಮಾತನಾಡುತ್ತ, ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದ ಬೈಂದೂರು ವಲಯ ಕ್ಷೇತ್ರದಲ್ಲಿ ಸಾರ್ವಜನಿಕ ಅರಸಿನ ಕುಂಕುಮ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಪ್ರಥಮ ಎಂದು ಅವರು ಅಭಿಪ್ರಾಯ ಪಟ್ಟರು.
ಕುಂದಾಪುರದ ಮೂಕಾಂಬಿಕಾ ಮಹಿಳಾ ಮಂಡಳಿ ಒಕ್ಕೂಟದ ಕಾರ್ಯದರ್ಶಿ ಜಯಂತಿ ಎನ್. ಐತಾಳ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮರವಂತೆ ಸರಕಾರಿ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಐ. ವಸಂತ ಕುಮಾರಿ, ಕೊಲ್ಲೂರು ಡಾಟ್.ಕಾಂನ ಸಂಯೋಜಕಿ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರ್, ಖಂಬದಕೋಣೆ ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ನಾಗಮ್ಮ ದೇವಾಡಿಗ ಗೊಬ್ರಾಣಿಮನೆ ಮುಖ್ಯ ಅತಿಥಿಗಳಾಗಿದ್ದರು. `ಪ್ರೀತಿ ಸೇವಾ ಫೌಂಡೇಶನ್' ಇದರ ಉಪಕೋಶಾಧಿಕಾರಿ ಜಾನಕಿ ಪೂಜಾರಿ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಟ್ರಸ್ಟಿ ಬೇಬಿ ರಂಗ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತ ಅರಸಿನ ಕುಂಕುಮದ ಮಹತ್ವದ ಬಗ್ಗೆ ವಿವರಣೆ ನೀಡಿದರು. ಆಡಳಿತ ವಿಶ್ವಸ್ಥ ರಂಗ ಎಸ್. ಪೂಜಾರಿ ಅತಿಥಿಗಳನ್ನು ಗೌರವಿಸಿದರು. ಟ್ರಸ್ಟಿ ನಾಗರಾಜ ಅಪ್ಪೇಡಿ ವಂದಿಸಿದರು. ಉಪಕಾರ್ಯದರ್ಶಿ ಸುರೇಶ್ ವಿ.ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.
ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಅರಸಿನ ಕುಂಕುಮ, ನೆನಪಿನಕಾಣಿಕೆ, ಅನ್ನ ಪ್ರಸಾದ ನೀಡಲಾಯಿತು.