ಮಂಗಳೂರು: ಪಡಿತರ ಚೀಟಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡುವ ಪ್ರಕ್ರಿಯೆಗೆ ಮೇ 31 ಕೊನೆಯ ದಿನಾಂಕ ಆಗಿದ್ದು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈ ಪ್ರಕ್ರಿಯೆಯಲ್ಲಿ ಬಿಪಿಎಲ್ ಕಾರ್ಡ್ಗಳಿಗೆ ಪ್ರಥಮ ಆದ್ಯತೆ ನೀಡಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ದಿಶೆಯಲ್ಲಿ ಈಗಾಗಲೇ ಶೇ. 63ರಷ್ಟು ಪ್ರಗತಿ ಆಗಿದೆ. ಇನ್ನುಳಿದ ಶೇ. 37ರಷ್ಟು ಸಾಧನೆ ಮುಂದಿನ 7 ದಿನಗಳಲ್ಲಿ ಆಗಬೇಕಾಗಿದೆ. ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಲಿಂಕ್ ಮಾಡಲಾಗುವುದು.ಮೇ 31ರೊಳಗೆ ಲಿಂಕ್ ಮಾಡದ ರೇಶನ್ ಕಾರ್ಡ್ಗಳಿಗೆ ಜೂನ್ ತಿಂಗಳಿಂದ ಪಡಿತರ ಸಾಮಗ್ರಿಗಳ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ರಾಜ್ಯ ಮಟ್ಟದಲ್ಲಿ ತುಮಕೂರು, ಬೆಂಗಳೂರು ನಗರದ ಬಳಿಕ ಉಡುಪಿ ಜಿಲ್ಲೆ 3ನೆಯ, ದ.ಕ. ಜಿಲ್ಲೆ 12ನೇ ಸ್ಥಾನದಲ್ಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೊನೆಯ ಸ್ಥಾನ (ಶೇ. 35)ದಲ್ಲಿದೆ. ಇದರಿಂದಾಗಿ ರಾಜ್ಯ ಮಟ್ಟದಲ್ಲಿ ಕೊನೆಯ ದಿನಾಂಕವನ್ನು ಸರಕಾರ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದರೂ ಅಧಿಕಾರಿಗಳು ದೃಢೀಕರಿಸುತ್ತಿಲ್ಲ.
ಮೇ 31ರಂದು ಲಭಿಸುವ ಅಂಕಿ-ಅಂಶಗಳನ್ನು ಆಧರಿಸಿ ಸರಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಇಲಾಖೆಯ ಜಿಲ್ಲಾ ಕಚೇರಿಯ ಮೂಲಗಳು ತಿಳಿಸಿವೆ. ಜನರು ತಮ್ಮ ರೇಶನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ಗಳೊಂದಿಗೆ ಗ್ರಾ.ಪಂ. ಕಚೇರಿ/ ತಾಲೂಕು ಕಚೇರಿಗೆ ಅಥವಾ ಸರಕಾರದ ಮಂಗಳೂರು ವನ್ ಕಚೇರಿಗೆ ತೆರಳಿ ಅಥವಾ ಸರಕಾರ ಒದಗಿಸಿರುವ 9731979899 ಮೊಬೈಲ್ ಫೋನ್ ನಂಬ್ರಕ್ಕೆ ಎಸ್ಎಂಎಸ್ ಮಾಡಿ ಲಿಂಕ್ ಮಾಡಬಹುದಾಗಿದೆ.