ಮಂಗಳೂರು: ಎತ್ತಿನಹೊಳೆ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದ್ದು, ಈ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ತಡೆಗೋಡೆ ನಿರ್ಮಿಸುವುದರಿಂದ ಕೆಳಗಡೆ ನೀರು ಹರಿದು ಬರಲಾರದು. ಒಂದೊಮ್ಮೆ ಅಣೆಕಟ್ಟು ನಿರ್ಮಿಸಿದರೆ ಹೆಚ್ಚುವರಿ ನೀರನ್ನು ಬಿಡಬಹುದಿತ್ತು. ಆದರೆ, ತಡೆಗೋಡೆ ನಿರ್ಮಿಸಿ ಕರಾವಳಿಗೆ ನೀರು ಬಾರದ ಹಾಗೆ ನೋಡಿಕೊಳ್ಳಲಾಗುತ್ತಿದೆ. ಇದೊಂದು ದೊಡ್ಡ ಷಡ್ಯಂತ್ರ ಎಂದವರು ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದರು.
ರಾಷ್ಟ್ರೀಯ ಹಸಿರು ಪೀಠಕ್ಕೆ ಹಾಲಿ ತಜ್ಞರು ರಾಜೀನಾಮೆ ನೀಡಿದ್ದು, ಅವರ ಜಾಗದಲ್ಲಿ ಪಿ.ಎಸ್.ರಾವ್ ಅವರನ್ನು ನೇಮಕ ಮಾಡಲಾಗಿದೆ. ಹಸಿರು ಪೀಠದಲ್ಲಿ ರಾಜ್ಯದ ಕರಾವಳಿಗೆ ಸಂಬಂಧಿಸಿ ವಾದ ಈಗಾಗಲೇ ಮುಕ್ತಾಯವಾಗಿದೆ. ಪುನ: ವಾದ ಮಂಡನೆಯನ್ನು ಪ್ರಾರಂಭಿಸ ಬೇಕಾಗಿದೆ. ಇದಕೆ ಕಾಲಮಿತಿ ಇಲ್ಲ. ಹಸಿರು ಪೀಠದಲ್ಲಿ ಪುನ: ಪ್ರಕರಣ ದಾಖಲಿಸಲು ರಾಜ್ಯ ಸರಕಾರ ಎಲ್ಲಾ ಸವಲತ್ತುಗಳನ್ನು ಒದಗಿಸಿ ಸಹಕರಿಸ ಬೇಕು. ಕರಾವಳಿಯನ್ನು ರಕ್ಷಿಸುವ ಜವಾಬ್ದಾರಿ ಸರಕಾರದ ಮೇಲಿದೆ ಎಂದು ಪೂಜಾರಿ ಆಗ್ರಹಿಸಿದರು.