ಮಂಗಳೂರು:ಕಡಲ ಭಾಗದ ಬೀಚ್ ಅಭಿವೃದ್ಧಿಗೆ ಕೇಂದ್ರ ಸರಕಾರ ರೂಪಿಸಿದ ಸ್ವದೇಶಿ ದರ್ಶನ್ ಯೋಜನೆಯಿಂದ ರಾಜ್ಯಕ್ಕೆ 92 ಕೋ. ರೂ. ಅನುದಾನ ಲಭಿಸಿದೆ. ಇದರೊಂದಿಗೆ ರಾಜ್ಯದ ನಿಧಿ ಬಳಸಿಕೊಂಡು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಮತ್ತು ಸಣ್ಣ ಹಾಗೂ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ಅವರು ಮಂಗಳೂರಿನ ಹಳೆಯಂಗಡಿ ಗ್ರಾ.ಪಂ.ನ ಸಸಿಹಿತ್ಲುವಿನ ಮುಂಡ ಪ್ರದೇಶದಲ್ಲಿ ರಾಷ್ಟ್ರೀಯ ಮಟ್ಟದ ಸರ್ಫಿಂಗ್ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.. ಕೇಂದ್ರ ಪ್ರವಾಸೋದ್ಯಮ ನೀತಿಯನ್ನು ರಾಜ್ಯದಲ್ಲಿ ಸಡಿಲಿಸಬೇಕು.
ಇದರಿಂದ ಇಲ್ಲಿ ಇನ್ನಷ್ಟು ಅಭಿವೃದ್ಧಿ ನಡೆಸಲು ಸಾಧ್ಯವಾಗಬಹುದು ಎಂದು ಹೇಳಿದರು. ರಾಜ್ಯದ ಉಳ್ಳಾಲದಿಂದ ಕಾರವಾರದವರೆಗೆ ಇರುವ ಸೋಮೇಶ್ವರ, ಸುರತ್ಕಲ್, ಮುಕ್ಕ, ತ್ರಾಸಿ, ಹೋಮ್ ಬೀಚ್, ಮಾವಿನ ಕುರುವೆ, ಮುರ್ಡೇಶ್ವರ ಸಹಿತ 9 ಬೀಚ್ಗಳನ್ನು ಈ ಯೋಜನೆಯಲ್ಲಿ ಅಳವಡಿಸಲಾಗುವುದು. ಇಲ್ಲಿ ಹೆರಿಟೇಜ್, ಈಕೋ, ಎಡ್ವೆಂಚರ್ ಟೂರಿಸಂ ಅನ್ನು ಪ್ರೋತ್ಸಾಹಿಸಲಾಗುವುದು, ರಾಜ್ಯದಲ್ಲಿ ಸಿ.ಆರ್.ಜೆಡ್. ನಿಯಮಗಳಿಂದ ಪ್ರವಾಸೋದ್ಯಮಕ್ಕೆ ಅಡ್ಡಿಯಾಗಿದೆ. ಕೆಲವೊಂದು ನಿಯಮಗಳಿಗೆ ರಿಯಾಯಿತಿ ನೀಡಲು ಇಲಾಖೆಯನ್ನು ವಿನಂತಿಸಲಾಗಿದೆ ಎಂದರು.್