ಮಂಗಳೂರು: ಮಂಗಳೂರಿನ ನ್ಯಾಯಾಲಯದಲ್ಲಿ ಶನಿವಾರ ವಿಚಾರಣೆಗಾಗಿ ಬಂದಿದ್ದ ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿಗಳಾದ ಸುಭಾಷ್ ಪಡೀಲ್ ಮತ್ತು ಸಂಪತ್ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದು, ಆರೋಪಿ ಕುಂಜತ್ತಬೈಲ್ನ ರಾಜು ಯಾನೆ ಜಪಾನ್ ಮಂಗ(25)ನನ್ನು ಸ್ಥಳದಲ್ಲಿಯೇ ಬಂಧಿಸಲಾಗಿದೆ.
ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಕೋರ್ಟ್ ಕಟ್ಟಡದ 3ನೇ ಮಹಡಿಯಲ್ಲಿರುವ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪೂರ್ವಾಹ್ನ 38 ಮಂದಿ ಆರೋಪಿಗಳು ಹಾಜರಾಗಿ ದ್ದರು. ಮುಂದಿನ ವಿಚಾರಣೆಗೆ ನ್ಯಾಯಾಧೀಶರು ದಿನಾಂಕವನ್ನು ನಿಗದಿಪಡಿಸಿದ ಬಳಿಕ 11.30ರ ವೇಳೆಗೆ ಆರೋಪಿಗಳು ಕೋರ್ಟ್ ಹಾಲ್ನಿಂದ ಹೊರಗೆ ಬಂದು ಮೆಟ್ಟಲುಗಳನ್ನು ಇಳಿದು ಕೆಳಗೆ ಬರುವಷ್ಟರಲ್ಲಿ ಸುಭಾಷ್ ಪಡೀಲ್ ಮತ್ತು ಸಂಪತ್ ಕೈಕಂಬ ಅವರಿಗೆ ರಾಜು ಯಾನೆ ಜಪಾನ್ ಮಂಗ ಎದುರಾಗಿದ್ದಾನೆ. ಸುಭಾಷ್ ಪಡೀಲ್ ಮತ್ತು ಸಂಪತ್ ಅವರನ್ನು ರಾಜು ಯಾನೆ ಜಪಾನ್ ಮಂಗ ಗುರಾಯಿಸಿ ನೋಡಿದ್ದು, ಈ ಸಂದರ್ಭ ಅವರೊಳಗೆ ಮಾತಿಗೆ ಮಾತು ಬೆಳೆದಿದೆ. ಜಪಾನ್ ಮಂಗನು ಸುಭಾಸ್ ಪಡೀಲ್ಗೆ ಬೈಯ್ದು "ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ' ಎಂದು ಹೇಳಿ ಚಾಕುವನ್ನು ತೆಗೆದು ತಿವಿಯಲು ಬಂದಿದ್ದಾನೆ. ಆಗ ಸುಭಾಸ್ ಪಡೀಲ್ ತಪ್ಪಿಸಿಕೊಂಡಿದ್ದಾನೆ. ಇದೇ ವೇಳೆ ಜಪಾನ್ ಮಂಗ ಚಾಕುವನ್ನು ಮಡಚಿ ಇಟ್ಟುಕೊಳ್ಳುವಾಗ ಆತನ ಎಡ ಕೈಯ ಉಂಗುರ ಬೆರಳಿಗೆ ತಗುಲಿ ಗಾಯವಾಗಿದೆ. ಅಲ್ಲಿಂದ ಓಡಿ ಕೆಳಗಡೆ ಹೋಗಿದ್ದು, ಆತನನ್ನು ಸುಭಾಸ್ ಪಡೀಲ್ ಮತ್ತು ಸಹಚರರು ಕೋರ್ಟ್ನ ಕೆಳ ಅಂತಸ್ತಿನವರೆಗೆ ಬೆನ್ನಟ್ಟಿಕೊಂಡು ಹೋಗಿದ್ದಾರೆ. ಕೆಳ ಅಂತಸ್ತು ತಲುಪುತ್ತಲೇ ಮಾರಾಮಾರಿ ನಡೆದಿದೆ. ಅಷ್ಟರಲ್ಲಿ ಅಲ್ಲಿ ಕರ್ತವ್ಯ ನಿರತರಾಗಿದ್ದ ನಾಲ್ವರು ಪೊಲೀಸರು ಪ್ರಕರಣದ ಗಂಭೀರತೆಯನ್ನು ಮನಗಂಡು ಕೂಡಲೇ ಧಾವಿಸಿ ಜಪಾನ್ ಮಂಗನನ್ನು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ.
ಪೂರ್ವ ದ್ವೇಷವೇ ಈ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ. ಚಂದ್ರ ಶೇಖರ್, ಡಿಸಿಪಿಗಳಾದ ಶಾಂತರಾಜು ಮತ್ತು ಡಾ| ಸಂಜೀವ್ ಎಂ. ಪಾಟೀಲ್, ಎಸಿಪಿ ತಿಲಕ್ಚಂದ್ರ, ಕದ್ರಿ ಠಾಣಾ ಇನ್ಸ್ಪೆಕ್ಟರ್ ಮಾರುತಿ ನಾಯಕ್, ಬಂದರ್ ಠಾಣಾ ಇನ್ಸ್ಪೆಕ್ಟರ್ ಶಾಂತಾ ರಾಮ್ ಭೇಟಿ ನೀಡಿ ಪರಿಶೀಲಿಸಿದರು.