ಮಂಗಳೂರು: ಮಂಗಳೂರಿನ ಸರಕಾರಿ ಲೇಡಿಗೋಶನ್ ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿ ಮುಕ್ತಾಯ ಹಂತ ತಲುಪಿದ್ದು, ನವೆಂಬರ್ ಅಂತ್ಯಕ್ಕೆ ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಅರಣ್ಯ, ಪರಿಸರ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ. ಲೇಡಿಗೋಶನ್ ಆಸ್ಪತ್ರೆಗೆ ಭೇಟಿ ನೀಡಿದ ಅವರು, ನೂತನ ಕಟ್ಟಡದ ಕಾಮಗಾರಿ ಪರಿಶೀಲಿಸಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.
ಅನುದಾನ ಬೇಡಿಕೆ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸದೆ ಮುಂದುವರಿಸುವಂತೆ ಕಟ್ಟಡ ಕಂಟ್ರಾಕ್ಟರ್ ಷರೀಫ್ ಅವರಿಗೆ ಸಚಿವರು ಸೂಚಿಸಿದರು. ಎಂಆರ್ಪಿಎಲ್ ವತಿಯಿಂದ 21.70 ಕೋಟಿ ರೂ. ಅನುದಾನ ನೀಡಲಾಗುತ್ತಿದ್ದು, ಈ ಅನುದಾನದಲ್ಲಿ 18.4 ಕೋಟಿ ರೂ.ಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ.ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು 10 ಕೋ.ರೂ. ಅವಶ್ಯವಿದೆ ಎಂದು ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕಿ ಡಾ| ಸವಿತಾ ತಿಳಿಸಿದರು. ಸರಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಲಾಗುವುದು. ಅಲ್ಲಿವರೆಗೆ ವೆನ್ಲಾಕ್ ಸರಕಾರಿ ಜಿಲ್ಲಾ ಆಸ್ಪತ್ರೆಯ ಯೂಸರ್ ಫಂಡ್ನಿಂದ 8.93 ಕೋ. ರೂ.ಗಳನ್ನು ಆರೋಗ್ಯ ರಕ್ಷಾ ಸಮಿತಿಯಲ್ಲಿ ಠೇವಣಿಯಾಗಿ ಕಾಯ್ದಿರಿಸಿ ಸುರತ್ಕಲ್ ದ.ಕ. ನಿರ್ಮಿತಿ ಕೇಂದ್ರದಿಂದ ಟೆಂಡರ್ ಮೂಲಕ ನಿರ್ವಹಿಸಲು ಸಚಿವರು ಸೂಚಿಸಿದರು.