ಸಾಂಘಿಕತೆಯಿಂದ ಸಂಘದ ಮುನ್ನಡೆ ಸಾಧ್ಯ: ದೇವಲ್ಕುಂದ ಭಾಸ್ಕರ್ ಶೆಟ್ಟಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಜೂ.07: ಗೋರೆಗಾಂವ್ ಕರ್ನಾಟಕ ಸಂಘದ 58ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಇಂದಿಲ್ಲಿ ಆದಿತ್ಯವಾರ ಸಂಜೆ ಸಂಘದ ಬಾರ್ಕೂರು ರುಕ್ಮಿಣಿ ಶೆಟ್ಟಿ ಸ್ಮಾರಕ ಕಿರು ಸಭಾಗೃಹದಲ್ಲಿ ಜರುಗಿತು. ಗೌರವ ಪ್ರಧಾನ ಕಾರ್ಯದರ್ಶಿ ವೀನಾ ಬಿ.ಕಳಾವಾರ್ ಗತ ವಾರ್ಷಿಕ ಮಹಾಸಭೆಯ ವರದಿ ಹಾಗೂ ಕಾರ್ಯನಿರ್ವಾಹಣಾ ಮಾಹಿತಿಯನ್ನಿತ್ತರು. ಗೌರವ ಕೋಶಾಧಿಕಾರಿ ನಾರಾಯಣ ಆರ್.ಮೆಂಡನ್ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು.
ಭಾಸ್ಕರ್ ಶೆಟ್ಟಿ ಅಧ್ಯಕ್ಷೀಯ ಭಾಷಣಗೈದು ಸಂಘವು ಸಾಂಘಿಕತೆಯಿಂದಲೇ ಮುನ್ನಡೆಯಲುಸಾಧ್ಯ. ಸದಸ್ಯರ ಸಹಯೋಗದಿಂದ ಸಾಮಾಜಿಕ ಚಟುವಟಿಕೆಗಳನ್ನು ಸಲೀಸಾಗಿ ಮುನ್ನಡೆಸ ಬಹುದು. ಸದ್ಯ ಸದಸ್ಯರನೇಕರಿಗೆ ಸಂಘದ ಕಾರ್ಯಚಟುವಟಿಕೆಗಳ ವಿವರಗಳು ತಪ್ಪಲು ಸೇವೆಯಿಂದ ತಡವಾಗಿ ಲಭಿಸುವ ಬಗ್ಗೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ. ಸಂಘದ ಭವಿಷ್ಯಕ್ಕಾಗಿ ಒಟ್ಟಾಗಿ ಶ್ರಮಿಸೋಣ ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಕಟ್ಕೆರೆ ಸಂಜೀವ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ವಸಂತಿ ಕೋಟೆಕಾರ್ ಮತ್ತು ವಿಠಲ್ ಎಂ.ಶೆಟ್ಟಿ, ವಾಚನಾಲಯದ ಮುಖ್ಯಸ್ಥ ಜೆ.ಕೆ ಹೆಗ್ಡೆ ವೇದಿಕೆಯಲ್ಲಿ ಆಸೀನರಾಗಿದ್ದರು. ಸಭೆಯಲ್ಲಿ 2016-17ರ ಅವಧಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಸಲಾಗಿದ್ದು, ನೂತನ ಅಧ್ಯಕ್ಷರಾಗಿ ದೇವಲ್ಕುಂದ ಭಾಸ್ಕರ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಕಟ್ಕೆರೆ ಸಂಜೀವ ಶೆಟ್ಟಿ, ವಿಶ್ವಸ್ಥ ಸದಸ್ಯರುಗಳನ್ನಾಗಿ ರವಿ.ರಾ ಅಂಚನ್, ಜಿ.ಟಿ ಆಚಾರ್ಯ, ಮುಂಡ್ಕೂರು ಸುರೇಂದ್ರ ಸಾಲಿಯಾನ್ ಅವರನ್ನು ಸಭೆಯು ಸರ್ವಾನುಮತದಿಂದ ಪುನರಾಯ್ಕೆಗೊಳಿಸಿತು.
ಸದಸ್ಯರುಗಳಾದ ಗ್ರಂಥಾಯನ ವಿಭಾಗದ ನಿರ್ದೇಶಕ ಗುಣೋದಯ ಎಸ್.ಐಲ್, ಹರೀಶ್ಚಂದ್ರ ಆಚಾರ್ಯ, ಮಾಜಿ ಅಧ್ಯಕ್ಷ ವಿ.ಪಿ ಕೋಟ್ಯಾನ್, ವಿಶ್ವಸ್ಥ ಸದಸ್ಯೆ ಪದ್ಮಜಾ ಮನ್ನೂರು, ಚಂದ್ರಶೇಖರ ಎನ್.ಶೆಟ್ಟಿ (ಚಾರ್ಕೋಪ್) ಮಾತನಾಡಿ ತಮ್ಮ ಭಿಪ್ರಾಯಗಳನ್ನು ವ್ಯಕ್ತ ಪಡಿಸಿ ಸಲಹೆ ಸೂಚನೆ ನೀಡಿ ಸಂಘದ ಉನ್ನತಿಗಾಗಿ ಹಾರೈಸಿದರು.
ಸಭೆಯಲ್ಲಿ ವಿಶ್ವಸ್ಥ ಸದಸ್ಯರುಗಳಾದ ಎಸ್.ಎಂ ಶೆಟ್ಟಿ, ಮುಂಡ್ಕೂರು ಸುರೇಂದ್ರ ಸಾಲಿಯಾನ್ ಹಾಗೂ ರವಿ.ರಾ ಅಂಚನ್, ಶಕುಂತಳಾ ಆರ್.ಶೆಟ್ಟಿ, ಜಿ.ಟಿ ಆಚಾರ್ಯ, ಪಯ್ಯಾರು ರಮೇಶ್ ಶೆಟ್ಟಿ, (ಮಾಜಿ ಅಧ್ಯಕ್ಷರು),
ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವೇದ ಎಂ.ಸುವರ್ಣ, ನಾರಾಯಣ ಟಿ.ಬಂಗೇರ, ಪಿ.ವಿ ಐತಾಳ್, ಮೋಹನ್ ಮಾರ್ನಾಡ್, ವಿಶ್ವನಾಥ್ ತೋನ್ಸೆ, ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ ಸರಿತಾ ಎಸ್.ನಾಯಕ್, ಸಂಚಾಲಕಿ ಸುಗುಣಾ ಎಸ್.ಬಂಗೇರ, ಯುವ ವಿಭಾಗದ ಕಾರ್ಯಧ್ಯಕ್ಷ ಭಾಸ್ಕರ್ ಟಿ.ಅಮೀನ್, ಗ್ರಂಥಾಯನ ವಿಭಾಗದ ಸಂಚಾಲಕಿ ಮೋಹಿನಿ ಆರ್.ಪೂಜಾರಿ, ರಂಗಸ್ಥಳ ವಿಭಾಗದ ನಿರ್ದೇಶಕ ಕೆ.ವಿ.ಆರ್ ಐತಾಳ್ ಮತ್ತಿತರರು ಪ್ರಮುಖರಾಗಿ ಹಾಜರಿದ್ದರು.
ಕಟ್ಕೆರೆ ಸಂಜೀವ ಶೆಟ್ಟಿ ಸ್ವಾಗತಿಸಿದರು. ಮೌನ ಪ್ರಾರ್ಥನೆಯೊಂದಿಗೆ ಅಗಲಿದ ಸದಸ್ಯರಿಗೆ ಶ್ರದ್ಧ್ಧಾಂಜಲಿ ಕೋರಲಾಯಿತು. ಸೀಮಾ ಕುಲ್ಕರ್ಣಿ ಬಳಗ ಪ್ರಾರ್ಥನೆಯನ್ನಾಡಿದರು. ಜೊತೆ ಕಾರ್ಯದರ್ಶಿ ವಸಂತಿ ಕೋಟ್ಯಾನ್ ವಂದಿಸಿದರು.