ಪುತ್ತೂರು : ತುಳುನಾಡಿನ ಪ್ರಾಚೀನ ಭಾಷೆಯಾದ ತುಳುವನ್ನು ಅಭಿವೃದ್ಧಿಪಡಿಸಲು ಯುವಕರು ಶ್ರಮಿಸಬೇಕು ಎಂದು ಪುತ್ತೂರು ರೋಯಲ್ ಟ್ರಸ್ಟ್ನ ಗೌರವಾಧ್ಯಕ್ಷ ದಂಬೆಕಾನ ಸದಾಶಿವ ರೈ ಕರೆ ನೀಡಿದರು.
ಅವರು ಪುತ್ತೂರಿನ ಅನುರಾಗ ವಠಾರದಲ್ಲಿ ನಡೆದ ಪುತ್ತೂರು ತಾಲೂಕು ತುಳು ಕೂಟದ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ತುಳು ಕೂಟದ ಅಧ್ಯಕ್ಷ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ತುಳು ಕೂಟದ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ ಮಹನೀಯರಿಗೆ ಕೃತಜ್ಞತೆ ಸಲ್ಲಿಸಿದರು. ಹಿರಿಯ ಸಾಹಿತಿ ಕುದ್ಕಾಡಿ ವಿಶ್ವನಾಥ ರೈ ಅವರು ಮಾತನಾಡಿ ಪ್ರವಾಸಿ ತಾಣಗಳನ್ನು ಸಂದರ್ಶಿಸುವವರು ಪಡುಮಲೆ ವಿಶ್ವ ಕಲಾನಿಕೇತನದಲ್ಲಿರುವ ತುಳು-ಕನ್ನಡ ಸಾಹಿತ್ಯ ಲೋಕವನ್ನು ವೀಕ್ಷಿಸಬಹುದು ಎಂದು ಸಲಹೆ ನೀಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪುರಂದರ ಭಟ್ ಬರೆಪ್ಪಾಡಿ ಹಿರಿಯ ಪತ್ರಕರ್ತ ಪ್ರೊ.ವಿ.ಬಿ.ಅರ್ತಿಕಜೆ ಅವರು ಶುಭ ಹಾರೈಸಿದರು. ತುಳು ಕೂಟದ ನೂತನ ಅಧ್ಯಕ್ಷ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಮಾತನಾಡಿ ತುಳು ಕೂಟದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ವಿನಂತಿಸಿದರು.
ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ ಪ್ರಾರ್ಥಿಸಿದರು. ನೂತನ ಕಾರ್ಯದರ್ಶಿ ಉಮಾಪ್ರಸಾದ್ ರೈ ನಡುಬೈಲು ಧನ್ಯವಾದ ಸಲ್ಲಿಸಿದರು. ತುಳು ಕೂಟದ ಸತೀಶ್ ಬಲ್ಯಾಯ, ಸೀತರಾಮ ರೈ ಬನ್ನೂರು, ವಿಜಯಕುಮಾರ್ ರೈ ಕೊರಂಗ, ಜಯಪ್ರಕಾಶ್ ರೈ ನೂಜಿಬೈಲು, ಕೃಷ್ಣಪ್ಪ ಶಿವನಗರ, ರೋಶನ್ ರೈ ಬನ್ನೂರು, ಶಿಕ್ಷಕ ರಾಮಣ್ಣ ರೈ ಮುಂತಾದವರು ಹಾಜರಿದ್ದರು.