ಮುಂಬಯಿ, ಜೂ.08: ಸದಾ ಧನಾತ್ಮಕ ಚಿಂತನೆಗಳನ್ನು ರೂಪಿಸಿಕೊಂಡು ಸಮುದಾಯದ ಮುನ್ನಡೆ ಗೊಳಿಸಿದಾಗಲೇ ಮಾನವ ಜೀವನ ಪಾವನ ಆಗುವುದು. ಅದಕ್ಕಾಗಿ ಸಮಾಜದ ಋಣ ಸಂದಾಯ ಮಾಡುವ ಉದಾರತೆ ನಾವು ಮೈಗೂಡಿಸಬೇಕು ಎಂದು ಬಿಲ್ಲವ ಜಾಗ್ರತಿ ಬಳಗ ಇದರ ಅಧ್ಯಕ್ಷರೂ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಬಿಸಿಸಿಐ)ನ ಸಂಸ್ಥಾಪಕಧ್ಯಕ್ಷ ಎನ್.ಟಿ ಪೂಜಾರಿ ತಿಳಿಸಿದರು.
ಕಳೆದ ಸೋಮವಾರ ಮಂಗಳೂರು ಅಲ್ಲಿನ ದೀಪ ಕಂಫರ್ಟ್ ಹೊಟೇಲು ಸಭಾಗೃಹದಲ್ಲಿ ಬಿಸಿಸಿಐ ಸೇವಾರ್ಪಣಾ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಎನ್.ಟಿ ಪೂಜಾರಿ ಮಾತನಾಡಿ ಸರಕಾರದ ಮತ್ತು ಸರಕರೇತರ ಸಂಸ್ಥೆಗಳ ಸಹಾಯಧನ, ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ವಂಚಿತರಾದ ಬಿಲ್ಲವ ಸಮಾಜವು ಸಮುದಾಯದ ಉನ್ನತಿಯ ಬಗ್ಗೆ ಚಿಂತಿಸುವ ಕಾಲ ಇದಾಗಿದೆ. ಸಮಗ್ರ ಬಿಲ್ಲವರ ಕೌಶಲ್ಯ ಸಂವರ್ಧನೆ ಮತ್ತು ವಿಪುಲ ಉದ್ಯೋಗವಕಾಶಗಳೊಂದಿಗೆ ಜಾಗತೀಕರಣಕ್ಕೆ ಸ್ಪಂದಿಸುವ ಯಶಸ್ವೀ ಉದ್ಯಮಿಗಳಾಗಲು ವಿಶಾಲ ಹೃದಯಿಗಳ ಸಾಂಘಿಕತೆಯ ಅವಶ್ಯಕತೆ ಬಯಸಿ ನಾವು ಯೋಜನೆವೊಂದನ್ನು ಕೈಗೊಂಡಿದ್ದೇವೆ. ಅದೇ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಸಂಸ್ಥೆ. ಬಿಲ್ಲವರ ಜೀವನ ಧ್ಯೇಯವನ್ನು ಅರಿತು ಈ ಸಂಸ್ಥೆ ಒಟ್ಟು ಸಮಾಜದ ಉನ್ನತಿಗಾಗಿ ತಮ್ಮ ಜೀವನವನ್ನು ಮುಡುಪಾಗಿರಿಸಲಿದ್ದು, ಸಮಗ್ರ ಬಿಲ್ಲವರ ಪ್ರಾಮಾಣಿಕ ಮತ್ತು ದಿಟ್ಟ ಸಹಯೋಗವವೂ ಈ ಸಂಸ್ಥೆಗಿರಲಿ ಎಂದರು.
ಸಭೆಯಲ್ಲಿ ದೀಪಾ ಕಂಫರ್ಟ್ಸ್ ಮಂಗಳೂರು ಸಮೂಹದ ಆಡಳಿತ ನಿರ್ದೇಶಕ ರಮೇಶ್ ಕುಮಾರ್, ಬಿಲ್ಲಬ ಮುಂದಾಳುಗಳಾದ ಅರುಣ್ ಕಿರೋಡಿಯನ್, ಡಾ| ಮೋಹನ್ ಸಾಲ್ಯಾನ್ ವೇದಿಕೆಯಲ್ಲಿ ಅಸೀನರಾಗಿದ್ದರು. ಬಿಸಿಸಿಐನ ನಿರ್ದೇಶಕ ಹರೀಶ್ ಜಿ. ಅವಿೂನ್ ಸ್ವಾಗತಿಸಿ ಬಿಸಿಸಿಐ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತರು. ಇದೇ ಬರುವ ಜೂ.11ರ ಶನಿವಾರ ಸಂಜೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಮಹಾರಾಷ್ಟ್ರದ ರಾಜ್ಯಪಾಲ ಸಿ.ಹೆಚ್ ವಿದ್ಯಾಸಾಗರ್ ರಾವ್ ಆಗಮಿಸಿ ಬಿಸಿಸಿಐ ಸಂಸ್ಥೆ ಸೇವಾರ್ಪಣೆ ಗೊಳಿಸಲಿದ್ದಾರೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯವಶ್ಯಕ ಎಂದು ಬಿಸಿಸಿಐನ ನಿರ್ದೇಶಕ ಪುರುಷೋತ್ತಮ ಎಸ್.ಕೋಟ್ಯಾನ್ ವಂದನಾರ್ಪಣೆಗೈದರು.