ಕನ್ನಡ ಮಾಧ್ಯಮ ಕಲಿಕೆ ತಾತ್ಸಾರ ಸಲ್ಲದು: ಚೆಲ್ಲಡ್ಕ ಕುಸುಮಾಧರ ಶೆಟ್ಟಿ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ (ಬಂಟ್ವಾಳ), ಜೂ.12: ಪೊಷಕರು ಮಕ್ಕಳಿಗೆ ಕೊಡಬಹುದಾದ ಶಾಶ್ವತ ಆಸ್ತಿ. ಮೌಲ್ಯಧಾರಿತ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಹಾಗೂ ಸೇವಾ ಸಂಸ್ಥೆಗಳು ಕೈ ಜೋಡಿಸಬೇಕು. ತಾನು ಕಲಿತ ಶಾಲೆಯ ಋಣ ತೀರಿಸುವ ನಿಟ್ಟಿನಲ್ಲಿ ಕುಸುಮಾಧರ ಶೆಟ್ಟಿಯವರು ಉಚಿತ ವಾಹನದ ಸೌಲಭ್ಯ ಒದಗಿಸಿ ಕೊಟ್ಟಿರುವುದು ಶ್ಲಾಘನೀಯ ಎಂದ ಅವರು ನಂಬಿಕೆಗಿಂತ ಮಿಗಿಲಾದ ಬಳುವಳಿ ಯಾವುದು ಇಲ್ಲ. ಜಾತಿ, ಧರ್ಮಗಳಿಂತ ಮನುಷ್ಯತ್ವವೇ ಮೇಲು ಎಂದು ಕರ್ನಾಟಕ ರಾಜ್ಯ ಸರಕಾರದ ಅರಣ್ಯ ಖಾತೆ ಹಾಗೂ ಪರಿಸರ ಜೀವಿಶಾಸ್ತ್ರ ಸಚಿವ, ದ.ಕ.ಜಿಲ್ಲಾ ಉಸ್ತುವರಿ ಮಂತ್ರಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ರಮಾನಾಥ ರೈ ತಿಳೀಸಿದರು.
ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಬಂಟ್ವಾಳ ತಾಲೂಕು ನಡುಮೊಗರು ಅಲ್ಲಿನ ದ.ಕ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಗೆ ಭವಾನಿ ಫೌಂಡೇಶನ್ ಮುಂಬಯಿ ಸಂಸ್ಥೆಯು ದಿ| ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ಸ್ಮರಣಾರ್ಥ ಕೊಡಮಾಡಿದ ಧರ್ಮಾರ್ಥ ಶಾಲಾ ಬಸ್ ಸೇವೆಗೆ ನಾರಿಕೇಲ ಹೊಡೆದು ನಂತರ ಹಸಿರು ನಿಶಾನೆ ತೋರಿಸಿ ಸೇವಾರ್ಪಣೆಗೈದರು ಹಾಗೂ ಜಯಶೆಟ್ಟಿ ಮುಂಬಯಿ ನೀಡಿದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಚಿವ ರೈ ನುಡಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಉಚಿತ ಶಾಲಾ ವಾಹನದ ದಾನಿ ಕುಸುಮಾಧರ ಶೆಟ್ಟಿ ಮಾತನಾಡಿ ನಾವು ಬೆಳೆದು ಬಂದ ಹಾದಿಯನ್ನು ಯಾವತ್ತು ಮರೆಯಬಾರದು. ನಾನು ಕಲಿತ ಶಾಲೆಗೆ ಕೊಡುಗೆ ನೀಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದರು. ಕನ್ನಡ ಮಾಧ್ಯಮವನ್ನು ಯಾರು ತಾತ್ಸಾರ ಮಾಡಬಾರದು, ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ಅನೇಕರು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಶಾಲೆಯ ಅಭಿವೃದ್ದಿಗೆ ಮುಂದೆಯೂ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಸಮಾರಂಭದಲ್ಲಿ ಅತಿಥಿüಗಳಾಗಿ ದ.ಕ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಪದ್ಮಶೇಖರ ಜೈನ್, ಪ್ರಕಾಶ್ಚಂದ್ರ ಶೆಟ್ಟಿ ತುಂಬೆ, ಬೂಡಾ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ತಾಲೂಕು ಪಂಚಾಯತ್ ಸದಸ್ಯೆ ಬೇಬಿ ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕೆ., ಸಮಾಜ ಸೇವಕರುಗಳಾದ ಮಾಯಿಲಪ್ಪ ಸಾಲ್ಯಾನ್, ಮುಂಡ್ರೇಲುಗುತ್ತು ಸಂಪತ್ಕುಮಾರ್ ಶೆಟ್ಟಿ, ನಡುಮೊಗರುಗುತ್ತು ಕೆ.ಎನ್ ಸಾಯಿಗಿರಿಧರ ಶೆಟ್ಟಿ, ದಂತ ತಞ್ಞ ಡಾ| ಕೆ.ರಾಜರಾಮ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಉಪಸ್ಥಿತರಿದ್ದು, ಮಕ್ಕಳಿಗೆ ಪರಿಕರ, ಪುಸ್ತಕಗಳನ್ನು ವಿತರಿಸಿ ಶುಭಕೋರಿದರು.
ಭವಾನಿ ಪೌಂಡೇಶ್ ವಿಶ್ವಸ್ಥ ಸದಸ್ಯ ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ, ಹಳೆವಿದ್ಯಾರ್ಥಿ ಸೇವಾ ಸಮಿತಿ ಅಧ್ಯಕ್ಷ ನಡುಮೊಗರುಗುತ್ತು ಕೆ.ಎನ್ ಶಿವರಾಮ ಶೆಟ್ಟಿ, ವಿನಯ ಕುಮಾರ್, ಮುಖ್ಯೋಪಾಧ್ಯಾಯ ಕೆ.ಚಂದ್ರ, ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ಗೌಡ ಎಂ., ಶಿವಪ್ಪ ಪೂಜಾರಿ ಹಟದಡ್ಕ, ಬೇಬಿ ಕುಂದರ್, ನಾರಾಯಣ ರೈ, ಸುಧಾಕರ ಶೆಟ್ಟಿ ಶಂಕರಬೆಟ್ಟು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಶಿಕ್ಷಕ ಎಸ್.ಮಧುಸೂದನ್ ಸ್ವಾಗತಿಸಿದರು. ಸಂಪತ್ ಕುಮಾರ್ ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕ ಹರಿಪ್ರಸಾದ್ ಡೆಚ್ಚಾರು ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್ ಸದಸ್ಯ ಆದಂ ಕುಂಞ್ಞ ವಂದಿಸಿದರು.