ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 500ಕ್ಕೂ ಅಧಿಕ ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ದೈವಸ್ಥಾನಗಳಿದ್ದು, ಅದರ ಗಡಿಕಾರರಿಗೆ ಮತ್ತು ಪಾತ್ರಿಯವರಿಗೆ ತಿಂಗಳ ವೇತನ ಮಂಜೂರು ಮಾಡಬೇಕೆಂದು ರಾಜ್ಯ ಮುಜರಾಯಿ ಸಚಿವ ಮನೋಹರ್ ತಹಶೀಲ್ದಾರ್ ಅವರಿಗೆ ಗಡಿಕಾರರು ಮನವಿ ಸಲ್ಲಿಸಿದ್ದಾರೆ.
ಆದಿತ್ಯವಾರ ಮಂಗಳೂರಿಗೆ ಆಗಮಿಸಿದ್ದ ಸಚಿವರನ್ನು ಸರ್ಕಿಟ್ ಹೌಸ್ನಲ್ಲಿ ಗಡಿಕಾರರು ಭೇಟಿಯಾಗಿ ತಮ್ಮ ಸಮಸ್ಯೆ ಮತ್ತು ಅಹವಾಲು ಮಂಡಿಸಿದರು.ದಕ್ಷಿಣ ಕನ್ನಡ ದೈವ-ದೇವರ ಆರಾಧನೆಯಲ್ಲಿ ರಾಜ್ಯದಲ್ಲೇ ಪ್ರಮುಖ ಜಿಲ್ಲೆಯಾಗಿದೆ. ಇಲ್ಲಿ ಸಾವಿರಾರು ದೇವಸ್ಥಾನ-ದೈವಸ್ಥಾನಗಳಿವೆ. ಈ ಪೈಕಿ ಹಲವು ದೈವಸ್ಥಾನ ಮುಜರಾಯಿ ಇಲಾಖೆ ಅಧೀನದಲ್ಲಿ ಬರುತ್ತಿದ್ದು, ಇಲ್ಲಿ ಸೇವೆ ಮಾಡುವ ಗಡಿಕಾರರು ಯಾವುದೇ ಆದಾಯವಿಲ್ಲದೆ ಶ್ರದ್ಧಾ ಭಕ್ತಿಯಿಂದ ಪ್ರತಿನಿತ್ಯ ಸೇವೆ ಮಾಡುತ್ತಿದ್ದಾರೆ. ಅವರಿಗೆ ಮುಜರಾಯಿ ಇಲಾಖೆಗಳ ದೇವಸ್ಥಾನ ಮಾದರಿಯಲ್ಲೇ ವೇತನ ನೀಡಬೇಕೆಂದು ಗಡಿಕಾರರು ಸಚಿವರನ್ನು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರಕಾರಿ ಮಟ್ಟದಲ್ಲಿ ಈ ಬಗ್ಗೆ ಚಿಂತನೆ ನಡೆಸಿ, ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದರು.ಈ ಸಂದರ್ಭ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಪಡು, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೃಥ್ವೀರಾಜ್ ಆರ್.ಕೆ. ಮತ್ತು ವಿವಿಧ ದೈವಸ್ಥಾನಗಳ ಗಡಿಕಾರರು ಉಪಸ್ಥಿತರಿದ್ದರು.