ಮಂಗಳೂರು: ಮಂಗಳೂರು ಹೊರವಲಯದ ತಣ್ಣೀರು ಬಾವಿಯಲ್ಲಿ ಗಾಲ್ಫ್ ಕೋರ್ಸ್ ನಿರ್ಮಾಣಕ್ಕೆ ಭೂಮಿ ಹಸ್ತಾಂತರಿಸಿ ೨ ವರ್ಷ ಕಳೆದರೂ ಯಾವುದೇ ಪ್ರಗತಿ ಆಗಿಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದ ಘಟನೆ ಬುಧವಾರ ನಡೆದಿದೆ.
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಗಾಲ್ಫ್ ಕೋರ್ಸ್ ನಿರ್ಮಾಣದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗಾಲ್ಫ್ ಕೋರ್ಸ್ ನಿರ್ಮಿಸಲು ೧೩೫ ಎಕರೆ ಭೂಮಿಯನ್ನು ಈಗಾಗಲೇ ತಣ್ಣೀರು ಬಾವಿಯಲ್ಲಿ ಓಪಸ್ ಹೋಟೆಲ್ ರೆಸಾರ್ಟ್ ಲಿಮಿಟೇಡ್ ಸಂಸ್ಥೆಗೆ ೨ ವರ್ಷಗಳ ಹಿಂದೆ ಹಸ್ತಾಂತರಿಸಲಾಗಿದೆ. ಆದರೂ, ಈವರೆಗೆ ಅಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರವಲ್ಲದೆ, ಈ ಬಗ್ಗೆ ಕೂಡಲೇ ಶೋಕಾಸ್ ನೋಟಿಸ್ ನೀಡಲು ಆದೇಶಿಸಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಸೇರಿದಂತೆ ಪ್ರವಾಸೋದ್ಯಮ ಇಲಾಖೆ , ಕಂದಾಯ ಇಲಾಖೆ ಹಾಗೂ ಮೀನುಗಾರಿಕೆ ಬಂದರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.