ಮಂಗಳೂರು: ಹಲವು ಲೋಪದೋಷಗಳಿಂದ ಕೂಡಿರುವ ಮತದಾರರ ಪಟ್ಟಿಗಳನ್ನು ಮತಗಟ್ಟೆ ಅನ್ವಯ ಶುದ್ಧೀಕರಣ ಮಾಡುವ ಕಾರ್ಯವನ್ನು ತತ್ಕ್ಷಣ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮತದಾರರ ಪಟ್ಟಿಯಲ್ಲಿರಬಹುದಾದ ಮೃತಪಟ್ಟವರ ಹೆಸರು, ಕ್ಷೇತ್ರ ಬಿಟ್ಟು ಬೇರೆಡೆಗೆ ಹೋಗಿರುವವರ ಹೆಸರು, ಮತದಾರರ ಪಟ್ಟಿಯಲ್ಲಿ ಎರಡೆರಡು ಸಲ ನೋಂದಾಯಿಸಿದವರ ಪಟ್ಟಿ, ಮತದಾರರ ದಾಖಲಾತಿಗಳ ತಿದ್ದುಪಡಿ ಹೆಸರು, ತಂದೆಯ ಹೆಸರು, ಹುಟ್ಟಿದ ದಿನಾಂಕ, ವಯಸ್ಸು ಇತ್ಯಾದಿಗಳ ತಪ್ಪುಗಳನ್ನು ಸರಿಪಡಿಸುವುದು ಸೇರಿದಂತೆ ಚುನಾವಣಾ ಆಯೋಗ ಸೂಚಿಸಿರುವ 17 ತಿದ್ದುಪಡಿಗಳನ್ನು ಮತದಾರರ ಪಟ್ಟಿಯಲ್ಲಿ ಮಾಡುವ ಮೂಲಕ ಮತದಾರರ ಪಟ್ಟಿಯನ್ನು ಶುದ್ಧಿಕರಿಸುವಂತೆ ಅವರು ನಿರ್ದೇಶನ ನೀಡಿದ್ದಾರೆ.ಆ. 31ರೊಳಗಾಗಿ ಜಿಲ್ಲೆಯ ಎಲ್ಲ ಮತದಾರರ ಪಟ್ಟಿಯ ಶುದ್ಧಿಕರಣ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. 2 ಕಿ.ಮೀ.ಗಿಂತಲೂ ಹೆಚ್ಚಿನ ದೂರವಿರುವ ಮತದಾನ ಕೇಂದ್ರಗಳನ್ನು ಗುರುತಿಸಿ ಮತಗಟ್ಟೆ ಹಂಚಿಕೆ ವೇಳೆ ಹೊಸ ಮತಗಟ್ಟೆಗಳನ್ನು ತೆರೆಯಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ರಾಜೇಂದ್ರ ಮೊದಲಾದವರು ಉಪಸ್ಥಿತರಿದ್ದರು