ಮಂಗಳೂರು: ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ವಿವಿಧೆಡೆ ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿದ್ದು, ನಿಯಮ ಉಲ್ಲಂಘನೆ ಮಾಡಿ ಮಿತಿಗಿಂತ ಹೆಚ್ಚು ಮಕ್ಕಳನ್ನು ಸಾಗಿಸುವ ವ್ಯಾನ್ ಹಾಗೂ ಆಟೋ ರಿಕ್ಷಾಗಳ ಸಹಿತ ಸುಮಾರು 65 ವಾಹನಗಳಿಗೆ ನೋಟಿಸ್ ನೀಡಿದ್ದಾರೆ.ಕಳೆದ ಮಂಗಳವಾರ ಕುಂದಾಪುರದ ತ್ರಾಸಿಯಲ್ಲಿ ಸಂಭವಿಸಿದ ಭೀಕರ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮಕ್ಕಳ ಸುರಕ್ಷೆಯ ಹಿನ್ನೆಲೆಯಲ್ಲಿ ವಿವಿಧ ಆದೇಶಗಳನ್ನು ಹೊರಡಿಸಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆಯನ್ನು ಬುಧವಾರದಿಂದ ನಡೆಸುತ್ತಿದೆ.ಮಂಗಳೂರು ನಗರದಲ್ಲಿ ಸುಮಾರು 40 ವಾಹನಗಳ ತಪಾಸಣೆ ನಡೆಸಿದ ಪೊಲೀಸರು ಚಾಲಕರಿಗೆ ತಿಳಿವಳಿಕೆ ಹಾಗೂ ನೋಟಿಸ್ ನೀಡಿದ್ದರು.
ಗುರುವಾರವೂ ಸಂಚಾರ ವಿಭಾಗದ ಎಸಿಪಿ ಉದಯ್ ನಾಯ್ಕ ಮಾರ್ಗದರ್ಶನಲ್ಲಿ ಬೆಳಗ್ಗಿನಿಂದ ನವಭಾರತ್ ಸರ್ಕಲ್, ಎಂ.ಜಿ. ರಸ್ತೆ, ಬಿಜೈ ಸೇರಿದಂತೆ ನಗರದ ವಿವಿಧೆಡೆ ಪರಿಶೀಲನಾ ಪ್ರಕ್ರಿಯೆ ಮುಂದುವರಿಸಿದೆ.ನಿಯಮ ಮೀರಿದ ರಿಕ್ಷಾ ಮತ್ತು ವ್ಯಾನ್ ಸೇರಿದಂತೆ ಸುಮಾರು 65 ವಾಹನಗಳಿಗೆ ನೋಟಿಸ್ ನೀಡಿ, ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿದರು. ಸದ್ಯಕ್ಕೆ ನೋಟಿಸ್ ನೀಡಲಾಗುತ್ತಿದ್ದು, ವ್ಯವಸ್ಥೆ ಸುಧಾರಣೆಯಾಗದಿದ್ದರೆ ದಂಡ, ಪ್ರಕರಣ ದಾಖಲಿಸಲಾಗುವುದು ಎಂದು ಎಸಿಪಿ ಉದಯ ನಾಯ್ಕ ಅವರು ತಿಳಿಸಿದ್ದಾರೆ.