ಮಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಮೋ ಬ್ರಿಗೇಡ್ ಮುಖಂಡ ಹಾಗೂ ಉದ್ಯಮಿ ನರೇಶ್ ಶೆಣೈಯನ್ನು ನಗರ ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಬಾಳಿಗ ಹತ್ಯೆಯ ಬಳಿಕ ಮೂರು ತಿಂಗಳು ಕಾಲ ತಲೆ ಮರೆಸಿಕೊಂಡಿದ್ದ ನರೇಶ್ ಶೆಣೈ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಬಂಧಿಸಲಾಗಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
ಮಾರ್ಚ್ 21ರಂದು ನಸುಕಿನ ಜಾವ ಕೊಡಿಯಾಲ್ಬೈಲ್ನ ವೆಂಕಟರಮಣ ದೇವಸ್ಥಾನಕ್ಕೆ ಹೋಗುತ್ತಿದ್ದ ವಿನಾಯಕ ಬಾಳಿಗ ಅವರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಘಟನೆ ನಡೆದ ದಿನದಿಂದಲೂ ನರೇಶ್ ಶೆಣೈ ತಲೆಮರೆಸಿಕೊಂಡಿದ್ದು, ಪೊಲೀಸರು ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು.
ಗುರುವಾರ ನಗರದ ಎರಡನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದ ಪೊಲೀಸರು, ನರೇಶ್ ಸೇರಿದಂತೆ ಏಳು ಮಂದಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದರು.
ಬಾಳಿಗ ಕೊಲೆ ನಡೆದ ದಿನದಿಂದಲೇ ನರೇಶ್ ತಲೆಮರೆಸಿಕೊಂಡಿದ್ದ. ಆತನ ಪತ್ತೆಗಾಗಿ ಪೊಲೀಸರು ಉತ್ತರ ಭಾರತದ ವಿವಿಧ ರಾಜ್ಯಗಳು, ಗೋವಾ ಮತ್ತು ಕೇರಳದ ಕೆಲವು ಸ್ಥಳಗಳು ಮತ್ತು ರಾಜ್ಯದ ಹಲವೆಡೆ ನಿರಂತರ ಶೋಧ ನಡೆಸಿದ್ದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ನಗರ ಪೊಲೀಸರು ಶೋಧ ನಡೆಸಿದ್ದರು.
ಘಟನೆ ಸಂಬಂಧ ಪದವಿನಂಗಡಿಯ ವಿನೀತ್ ಪೂಜಾರಿ ಮತ್ತು ಶಕ್ತಿನಗರದ ನಿಶಿತ್ ದೇವಾಡಿಗ ಎಂಬುವರನ್ನು ಮಾರ್ಚ್ 27ರಂದು ಬಂಧಿಸಲಾಗಿತ್ತು. ನಂತರ ಪಂಜಿಮೊಗರು ನಿವಾಸಿ ಶಿವಪ್ರಸಾದ್ ಅಲಿಯಾಸ್ ಶಿವ, ಕೋಟೆಕಾರ್ ನಿವಾಸಿ ಶೈಲೇಶ್ ಅಲಿಯಾಸ್ ಶೈಲು, ಮಣ್ಣಗುಡ್ಡೆ ನಿವಾಸಿ ಕೆ.ಮಂಜುನಾಥ ಶೆಣೈ ಅಲಿಯಾಸ್ ಮಂಜು ಎಂಬುವರನ್ನು ಪೊಲೀಸರು ಬಂಧಿಸಿದ್ದರು. ನರೇಶ್ ಆಪ್ತ ಕಾವೂರು ಶಾಂತಿನಗರದ ಶ್ರೀಕಾಂತ್ ನನ್ನು ಕೆಲವು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು.