ಮಂಗಳೂರು: ದ.ಕ.ಜಿಲ್ಲೆಯ ಪುತ್ತೂರು ತಾಲ್ಲೂಕಿನ ಸವಣೂರು ಬೆಳ್ಳಾರೆ ರಸ್ತೆಯ ಕೊಂಡೆಪ್ಪಾಡಿ ಎಂಬಲ್ಲಿ ಬೈಕೊಂದು ಸ್ಕಿಡ್ ಆಗಿ ಮಗುಚಿ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಪುತ್ತೂರು ತಾಲ್ಲೂಕಿನ ಪುಣ್ಚಪ್ಪಾಡಿ ಗ್ರಾಮದ ನೂಜಾಜೆ ಮೋನಪ್ಪ ನಾಯ್ಕ ಅವರ ಪುತ್ರ, ಪತ್ರಿಕೋದ್ಯಮ ಪದವೀಧರನಾದ ಸತೀಶ್ ನೂಜಾಜೆ (26) ಮೃತಪಟ್ಟ ಯುವಕ.ಸತೀಶ್ ಅವರು ಶುಕ್ರವಾರ ಬೆಳ್ಳಾರೆ ಕಡೆಯಿಂದ ಸವಣೂರು ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಅವರು ಚಲಾಯಿಸುತ್ತಿದ್ದ ಬೈಕ್ ಕೊಂಡೆಪ್ಪಾಡಿ ಎಂಬಲ್ಲಿ ಸ್ಕಿಡ್ ಆಗಿ ರಸ್ತೆಗೆ ಮಗುಚಿ ಬಿದ್ದಿತ್ತು, ಘಟನೆಯ ವೇಳೆ ಬೈಕಿನಿಂದ ಎಸೆಯಲ್ಪಟ್ಟ ಸತೀಶ್ ಅವರ ತಲೆ ರಸ್ತೆಗೆ ಬಡಿದ ಪರಿಣಾಮವಾಗಿ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿ ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.ಸತೀಶ್ ಅವರ ಮೂವರು ಸಹೋದರಿಯರ (ಅಕ್ಕಂದಿರ) ಪೈಕಿ ಕೊನೆಯ ಸಹೋದರಿಯ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಗುರುವಾರ ನಡೆದಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಬಂಧಿಕರೊಬ್ಬರನ್ನು ಅವರ ಮನೆಗೆ ಬೈಕಿನಲ್ಲಿ ಕರೆದುಕೊಂಡು ಹೋಗಿ ಮನೆಗೆ ಬಿಟ್ಟು, ಸತೀಶ್ ಅವರು ಹಿಂತಿರುಗಿ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.ಮೂರು ವರ್ಷಗಳ ಹಿಂದೆಯಷ್ಟೇ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪೂರೈಸಿದ್ದ ಸತೀಶ್ ಅವರು ಕೃಷಿ ಕೆಲಸದಲ್ಲಿ ತೊಡಗಿದ್ದರು.
ಜೊತೆಗೆ ಸಣ್ಣಮಟ್ಟಿನ ವ್ಯವಹಾರಗಳನ್ನು ಹೊಂದಿದ್ದರು. ಸ್ವಉದ್ಯೋಗ ನಡೆಸುವ ಕನಸು ಹೊತ್ತಿದ್ದ ಅವರನ್ನು ವಿಧಿ ಅಘಫಾತದ ಮೂಲಕ ಬಲಿ ತೆಗೆದುಕೊಂಡಿದೆ. ಮೋನಪ್ಪ ನಾಯ್ಕ ಅವರ ನಾಲ್ವರು ಮಕ್ಕಳ ಪೈಕಿ ಪುತ್ರನಾಗಿ ಮನೆಗೆ ಆಧಾರ ಸ್ತಂಭವಾಗಿದ್ದರು, ಈ ದುರ್ಘಟನೆಯಿಂದಾಗಿ ಇದೀಗ ಈ ಕುಟುಂಬದ ಆಧಾರ ಸ್ತಂಭವೇ ಕಳಚಿಕೊಂಡಂತಾಗಿದೆ.