ಮಂಗಳೂರು: ಕರಾವಳಿಯಾದ್ಯಂತ ನದಿ ಮರಳು ವಹಿವಾಟು ಚಾಲ್ತಿಯಲ್ಲಿರುವಂತೆಯೇ, ಜಲ್ಲಿ ಕ್ರಶರ್ಗಳ ಮೂಲಕವಾಗಿ ಉತ್ಪಾದಿತ ಮರಳು (ಎಂ-ಸ್ಯಾಂಡ್) ಉತ್ಪಾದನೆಗೆ ಬೇಡಿಕೆ ಅಧಿಕವಾಗುತ್ತಿದೆ. ಲಕ್ಷದ್ವೀಪ, ಮಾಲ್ಡಿವ್ಸ್, ಕೇರಳ, ಬೆಂಗಳೂರು ಭಾಗಕ್ಕೆ ಎಂ-ಸ್ಯಾಂಡ್ ಸರಬರಾಜು ಮಾಡಲು ಮಂಗಳೂರಿಗೆ ಈಗ ಅವಕಾಶಗಳು ಲಭಿಸುತ್ತಿವೆ. ದ.ಕ., ಉಡುಪಿ ಜಿಲ್ಲೆಯಾದ್ಯಂತ ಸುಮಾರು 20ರಿಂದ 25 ಉತ್ಪಾದಿತ ಮರಳು ವ್ಯಾಪಾರಸ್ಥರಿದ್ದಾರೆ. ಕರಾವಳಿಯಲ್ಲಿ ನದಿ ಮರಳು ಹೇರಳವಾಗಿ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಉತ್ಪಾದಿತ ಮರಳಿಗೆ ಬೇಡಿಕೆ ಇಲ್ಲ. ಆದರೆ, ಇತರ ಭಾಗದಲ್ಲಿ ನದಿ ಮರಳು ಲಭ್ಯವಿಲ್ಲದ ಕಾರಣ ಹಾಗೂ ಅಧಿಕ ಹಣ ಕೊಡಬೇಕಾದ ಹಿನ್ನೆಲೆಯಲ್ಲಿ ಉತ್ಪಾದಿತ ಮರಳಿಗೆ ಬೇಡಿಕೆ ಇದೆ. ಈ ಕುರಿತಂತೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಪ್ರಥಮ ಮಾಹಿತಿ ಕಾರ್ಯಾಗಾರ ನಡೆಯಿತು.
ಬಂಡೆಕಲ್ಲುಗಳನ್ನು ಜಲ್ಲಿ ಕ್ರಶರ್ಗಳ ಮೂಲಕ ಜಲ್ಲಿಕಲ್ಲುಗಳಾಗಿ ಮಾಡಲಾಗುತ್ತದೆ. ಇದರಲ್ಲಿ ಧೂಳುಗಳು ಉಳಿಯುತ್ತವೆ. ಇದನ್ನು ಪ್ರಸ್ತುತ ಇತರ ಬಳಕೆಗೆ ಉಪಯೋಗಿಸಲಾಗುತ್ತಿದೆ. ಆದರೆ, ಇದೇ ಧೂಳನ್ನು ಬಳಸಿ, ಅದನ್ನು ಯಂತ್ರಗಳ ಸಹಾಯದಿಂದ ಮರುಸಂಸ್ಕರಣ ಮಾಡಿ ಮರಳಿನ ಸ್ವರೂಪ ನೀಡಲಾಗುತ್ತದೆ. ಮರುಸಂಸ್ಕರಣೆಗೊಂಡ ಬಳಿಕ ಸಿಗುವುದೇ ಉತ್ಪಾದಿತ ಮರಳು. ನದಿ ಮರಳಿನಲ್ಲಿ ಇರುವ ಪ್ರಮಾಣವೇ ಉತ್ಪಾದಿತ ಮರಳಿನಲ್ಲೂ ಇರುತ್ತದೆ.
ಎಂ-ಸ್ಯಾಂಡ್ ಬಳಕೆ ಪ್ರಸ್ತುತ ರಾಜ್ಯದಲ್ಲಿ ಪ್ರಚುರದಲ್ಲಿದೆ. ಪರಿಸರಕ್ಕೆ ಧಕ್ಕೆ ಆಗದಂತೆ ಉತ್ಪಾದಿಸಿ ಇದರ ಬಳಕೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಶನಿವಾರ ಪ್ರಾಥಮಿಕ ಸಭೆಯನ್ನು ಜಿಲ್ಲಾಡಳಿತ ಕಚೇರಿಯಲ್ಲಿ ಮಾಡಲಾಗಿದೆ. ಕ್ರೆಡಾೖ, ಬಿಲ್ಡರ್ನವರನ್ನು ಕರೆದು ಅವರಿಗೆ ಎಂ-ಸ್ಯಾಂಡ್ ಬಗ್ಗೆ ಸಮಗ್ರ ಮಾಹಿತಿ ನೀಡಲು ಶೀಘ್ರದಲ್ಲಿ ಇನ್ನೊಂದು ಸಭೆ ನಡೆಸಲಾಗುವುದು ಎಂದು ಎ.ಬಿ.ಇಬ್ರಾಹಿಂ, ದ.ಕ. ಜಿಲ್ಲಾಧಿಕಾರಿ ಹೇಳಿದ್ದಾರೆ.