ಮಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲೆಯಾದ್ಯಂತ ಡೆಂಗ್ಯೂ ಮಹಾಮಾರಿ ದಿನದಿಂದ ದಿನಕ್ಕೆ ವ್ಯಾಪಿಸತೊಡಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಎರಡೂ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆ ಆಗುತ್ತಿರುವುದು ಕರಾವಳಿ ಜನರ ಆತಂಕಕ್ಕೆ ಕಾರಣವಾಗುತ್ತಿದೆ.ಎರಡೂ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣದಿಂದ ಒಟ್ಟು 13 ಶಂಕಿತ ಸಾವು ವರದಿಯಾಗಿದ್ದು, 2,050 ಜನರಲ್ಲಿ ಶಂಕಿತ ಡೆಂಗ್ಯೂ ಪ್ರಕರಣ ಕಂಡುಬಂದಿದೆ.
ಇದರಲ್ಲಿ 562 ಜನರಿಗೆ ಡೆಂಗ್ಯೂ ದೃಢಪಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ (796) ಇದು ಏರಿಕೆ ಪ್ರಮಾಣದಲ್ಲಿದೆ.ದ.ಕ. ಜಿಲ್ಲೆಯಲ್ಲಿ 2016ನೇ ವರ್ಷದಲ್ಲಿ ಇದುವರೆಗೆ ಒಟ್ಟು 1,500 ಶಂಕಿತ ಡೆಂಗ್ಯೂ ಪ್ರಕರಣಗಳು ಕಂಡುಬಂದಿದ್ದು, ಈ ಪೈಕಿ 289 ಪ್ರಕರಣಗಳಲ್ಲಿ ಡೆಂಗ್ಯೂ ದೃಢಪಟ್ಟಿವೆ. 11 ಜನರ ಸಾವು ಸಂಭವಿಸಿದ್ದು ಈ ಪೈಕಿ ಮೂರು ಪ್ರಕರಣಗಳ ಡೆಂಗ್ಯೂ ಎಂದು ಖಚಿತವಾಗಿದೆ. ಉಳಿದ ಮೂರು ಸಾವು ಪ್ರಕರಣಗಳಲ್ಲಿ ಡೆಂಗ್ಯೂ ಸಂಬಂಧಿತ ಅಂಶಗಳು ಇರುವುದು ಗೊತ್ತಾಗಿದ್ದು, ಉನ್ನತ ವರದಿಗಾಗಿ ಇದನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಉಳಿದ ಪ್ರಕರಣಗಳಲ್ಲಿ ಡೆಂಗ್ಯೂ ಅಂಶಗಳಿಲ್ಲ ಎಂದು ದೃಢಪಟ್ಟಿದೆ.