ಮಂಗಳೂರು: ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಕಳೆದ ಹಲವು ವರ್ಷಗಳ ಬಳಿಕ ದೊಡ್ಡ ಮಟ್ಟದಲ್ಲಿ ಕಡಲ್ಕೊರೆತವಾಗಿದೆ. ಉಚ್ಚಿಲದಲ್ಲಿ ಮೂರು ಮನೆ ಸಹಿತ ಒಟ್ಟು 16 ಮನೆಗಳಿಗೆ ಹಾನಿಯಾಗಿದ್ದು, 49 ಮನೆಗಳು ಅಪಾಯದ ಅಂಚಿನಲ್ಲಿವೆ.ಸೋಮೇಶ್ವರ ಉಚ್ಚಿಲದಲ್ಲಿ ಮೂರು ಮನೆಗಳನ್ನು ಖಾಲಿ ಮಾಡಲಾಗಿದ್ದು, ಉಳ್ಳಾಲದ ಕಿಲೇರಿಯಾ ನಗರದಲ್ಲಿ 6 ಮನೆ, ಮುಕ್ಕಚ್ಚೇರಿಯ 4 ಮನೆ, ಮೊಗವೀರಪಟ್ಣದಲ್ಲಿ 3 ಮನೆಗಳಿಗೆ ಹಾನಿಯಾಗಿವೆ. ಸೀಗ್ರೌಂಡ್ನಲ್ಲಿ ತಾತ್ಕಾಲಿಕ ಕಲ್ಲು ಹಾಕದೆ ಇದ್ದ ಪರಿಣಾಮ ಖಾಲಿ ಜಾಗ ಕೊರೆತಕ್ಕೀಡಾಗಿದ್ದು, ಸಮುದ್ರ ಮುಂದೆ ಬಂದಿದೆ.ಸೋಮೇಶ್ವರ ಉಚ್ಚಿಲದಲ್ಲಿ 9 ಮನೆಗಳು ಅಪಾಯದಲ್ಲಿದ್ದು, ಕೋಟೆಪುರದಲ್ಲಿ 10 ಮನೆ, ಮೊಗವೀರಪಟ್ಣದಲ್ಲಿ 15 ಮನೆ, ಕಿಲೆರಿಯಾ ನಗರದಲ್ಲಿ 9 ಮನೆ, ಮುಕ್ಕಚ್ಚೇರಿಯಲ್ಲಿ 6 ಮನೆಗಳು ಅಪಾಯದಲ್ಲಿವೆ. ಕಿಲೇರಿಯಾ ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಅಗ್ನಿಶಾಮಕ ದಳದ ಸಿಬಂದಿಗಳು ಮನೆಗೆ ನುಗ್ಗುತ್ತಿರುವ ನೀರನ್ನು ಖಾಲಿ ಮಾಡಲು ಪ್ರಯತ್ನಿಸುತ್ತಿದ್ದು, ಖಾಲಿ ಮಾಡಿದಷ್ಟು ಸಮುದ್ರದ ಅಲೆಗಳಿಂದ ಬರುತ್ತಿರುವ ನೀರು ಶೇಖರಣೆಯಾಗುತ್ತಿದೆ.
ಸೋಮವಾರ ಅಮವಾಸ್ಯೆ ಹಿನ್ನೆಲೆಯಲ್ಲಿ ಸಮುದ್ರ ಇನ್ನಷ್ಟು ಬಿರುಸುಗೊಳ್ಳಲು ಕಾರಣವಾಗಿದೆ ಎಂದು ಹಿರಿಯರೊಬ್ಬರು ತಿಳಿಸಿದರು.ಸ್ಥಳೀಯ ಜನಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಭೆಟಿ ನೀಡಿ ರಕ್ಷಣಾ ಕಾರ್ಯಕ್ಕೆ ಸ್ಪಂದಿಸುತ್ತಿದ್ದಾರೆ.