ಮಂಗಳೂರು: ಡಾ| ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಒಳಪಡುವ ಯಾವುದೇ ಗ್ರಾಮದ ರೈತರನ್ನು ಸರಕಾರ ಒಕ್ಕೆಲೆಬ್ಬಿಸುವುದಿಲ್ಲ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.ಡಾ| ಕಸ್ತೂರಿ ರಂಗನ್ ವರದಿ ಬಗ್ಗೆ ಅರಣ್ಯ ಇಲಾಖೆ ಕೈಗೊಂಡಿರುವ ಅಂತಿಮ ನಿರ್ಣಯದ ಕುರಿತು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ'ಸೋಜಾ ಅವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿರುವ ಸಚಿವ ರೈ, ಕಸ್ತೂರಿ ರಂಗನ್ ವರದಿಯಿಂದ ಡೀಮ್ಡ್ ಫಾರೆಸ್ಟ್ ಪ್ರದೇಶಗಳಲ್ಲಿ ವಾಸಿಸುವ ಯಾವುದೇ ಕುಟುಂಬಗಳನ್ನು ಒಕ್ಕೆಲೆಬ್ಬಿಸುವ ಪ್ರಯತ್ನ ಇರುವುದಿಲ್ಲ.
ಅರಣ್ಯ ಒತ್ತುವರಿ ಮತ್ತು ಪಟ್ಟಾ ಜಮೀನು ಸೇರಿ 3 ಎಕರೆಗಿಂತ ಕಡಿಮೆ ಇರುವ ಅರಣ್ಯ ಒತ್ತುವರಿದಾರರನ್ನು ಒಕ್ಕೆಲೆಬ್ಬಿಸಬಾರದು ಎಂದು 2015ರ ಮಾ. 13ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ. ಅರಣ್ಯ ಜಮೀನನ್ನು ಅಕ್ರಮಸಕ್ರಮದಡಿ ಕ್ರಮಬದ್ದಗೊಳಿಸಲು ಅವಕಾಶವಿರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.