ಮುಂಬಯಿ, ಜು.07: ತುಳು ಭಾಷೆಯ ಉಳಿವು ಹಾಗೂ ತುಳಿವಿನ ಏಳಿಗೆಗಾಗಿ ಪತ್ರಿಕಾ ಮಾಧ್ಯಮದ ಮೂಲಕ ಪ್ರಚುರ ಪಡಿಸುತ್ತಾ ವಿಶಿಷ್ಟವಾಗಿ ಕಾರ್ಯೋನ್ಮುಕವಾಗಿರುವ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ನಾಲ್ಕನೇ ವರ್ಷದ ಸವಿನೆನಪಿಗಾಗಿ ಮೂಲ್ಕಿಯ ಬಪ್ಪನಾಡಿನಲ್ಲಿ ತುಳು ಸಮ್ಮೇಳನವನ್ನು ನಡೆಸುವ ಬಗ್ಗೆ ಭಾರಿ ತಯಾರಿ ನಡೆಯುತ್ತಿದೆ.
ಸಮಾಜ ಸೇವಕ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಗೌರವ ಅಧ್ಯಕ್ಷತೆಯಲ್ಲಿ ಮತ್ತು ತುಳು ಸಾಹಿತಿ, ಸಂಶೋಧಕರಾದ ಡಾ| ವೈ.ಎನ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯು ಕಾರ್ಯ ನಿರ್ವಹಿಸುತ್ತಿದೆ.
ಮೂಲ್ಕಿಯ ಬಪ್ಪನಾಡುವಿನಲ್ಲಿ ಕಳೆದ ಮೂವತ್ತು ವರ್ಷದ ಹಿಂದೆ ತುಳು ಸಮ್ಮೇಳನ ನಡೆದ ಇತಿಹಾಸವಿದ್ದು ಇದೀಗ ಮತ್ತೆ ಇದೇ ಕ್ಷೇತ್ರದ ಸನ್ನಿಧಾನದಲ್ಲಿ ತುಳು ಸಮ್ಮೇಳನ ನಡೆಯುತ್ತಿರುವುದಕ್ಕೆ ತುಳುನಾಡಿನ ಸಮಸ್ತ ಜನರು ಕೈಜೋಡಿಸಬೇಕು ಪತ್ರಿಕೆಯ ಆಶಯದಂತೆ ಸಮಸ್ತ ತುಳುನಾಡಿನ ಬಾಂಧವರು ಸೇರಬೇಕು ಎಂಬ ಸದುದ್ದೇಶವನ್ನು ಹೊಂದಿರುವ ತುಳು ಸಮ್ಮೇಳನ ಸಮಿತಿಯು ತುಳು ಭಾಷಿಗರ ಭದ್ರ ನೆಲೆಯಾಗಿರುವ ಮುಂಬಯಿಯಲ್ಲಿ ವಿಶೇಷ ಸಭೆಯನ್ನು ಸಂಯೋಜಿಸಲಾಗಿದೆ.
ಆಗಸ್ಟ್ 13 ಮತ್ತು 14ರಂದು ಮಂಗಳೂರು ತಾಲೂಕಿನ ಮೂಲ್ಕಿ ಅಲ್ಲಿನ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಲಿರುವ ಈ ಸಮ್ಮೇಳನದ ಪೂರ್ವಭಾವಿಯಾಗಿ ನಾಳೆ ಜುಲೈ 9ರ ಶನಿವಾರ ಸಂಜೆ 5 ಗಂಟೆಗೆ ಮುಂಬಯಿಯ ಸಾಂತಾಕ್ರೂಸ್ ಪಶ್ಚಿಮದಲ್ಲಿನ ಶ್ರೀ ನಾರಾಯಣಗುರು ರಸ್ತೆಯ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ನ ಬಿಲ್ಲವರ ಭವನದಲ್ಲಿ ವಿಶೇಷ ಸಭೆಯನ್ನು ಸಂಯೋಜಿಸಲಾಗಿದೆ. ಈ ಸಂದರ್ಭದಲ್ಲಿ ತುಳು ಸಮ್ಮೇಳನದ ಮುಂಬಯಿ ಸಮಿತಿಯನ್ನು ರಚಿಸಲಾಗುವುದು.
ಮುಂಬಯಿಯ ತುಳು ಭಾಷಿಗರು, ಅಭಿಮಾನಿಗಳು, ತುಳುನಾಡಿನ ಸಮಸ್ತ ತುಳು ಬಾಂಧವರು, ಸಾಹಿತಿಗಳು, ರಂಗಭೂಮಿ ಚಟುವಟಿಕೆಯಲ್ಲಿರುವವರು, ಉದ್ಯಮಿಗಳು, ಸಮಾಜ ಸೇವಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂಬಯಿಯ ತುಳು ಸಂಘಟಕರಾದ ಜಿ.ಟಿ.ಆಚಾರ್ಯ (09820357758) ಸಂಪರ್ಕಿಸಬಹುದು. ಆಸಕ್ತರೆಲ್ಲರಿಗೂ ಮುಕ್ತವಾಗಿ ಸ್ವಾಗತವಿದೆ ಎಂದು ಮೂಲ್ಕಿ ತುಳು ಸಮ್ಮೇಳನ ಸಮಿತಿಯ ಪ್ರಕಟಣೆ ತಿಳಿಸಿದೆ.