ಮಂಗಳೂರು: ಪಶ್ಚಿಮ ವಲಯದ ಐಜಿಪಿ ಕಚೇರಿಯಲ್ಲಿ ಡಿವೈಎಸ್ಪಿಯಾಗಿದ್ದ ಎಂ.ಕೆ. ಗಣಪತಿ (51) ಕೊಡಗು ಜಿಲ್ಲೆ ಮಡಿಕೇರಿಯ ಲಾಡ್ಜ್ನಲ್ಲಿ ಗುರುವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೊಡಗು ಜಿಲ್ಲೆಯವ ರಾಗಿದ್ದ ಗಣಪತಿ ಗುರುವಾರ ಬೆಳಗ್ಗೆ ಮಡಿಕೇರಿಯ ಲಾಡ್ಜ್ ವೊಂದಕ್ಕೆ ತೆರಳಿ 315ನೇ ನಂಬ್ರದ ಕೊಠಡಿ ಪಡೆದಿದ್ದರು. ಮಧ್ಯಾಹ್ನದ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಗುರುವಾರ ಬೆಳಗ್ಗೆ 10.15ರ ವೇಳೆಗೆ ಆಗಮಿಸಿ ರೂಂ ಬುಕ್ ಮಾಡಿದ್ದರು. ಸಂಜೆ ವೇಳೆ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮಧ್ಯಾಹ್ನ ಅವರು ಪೊಲೀಸ್ ಸಮವಸ್ತ್ರದಲ್ಲಿ ಹೊರಗೆ ಹೋಗಿದ್ದು, ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು ಎನ್ನಲಾಗಿದೆ. ಸಂದರ್ಶನದಲ್ಲಿ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಆಡಳಿತ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದರೆಂದು ತಿಳಿದುಬಂದಿದೆ.ಮೂಲತಃ ಮಡಿಕೇರಿಯ ರಂಗಸಮುದ್ರ ನಿವಾಸಿಯಾಗಿದ್ದ ಗಣಪತಿಯವರು 1991ರಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದರು.
2001ರಲ್ಲಿ ಇನ್ಸ್ಪೆಕ್ಟರ್ ಆಗಿ ಭಡ್ತಿ ಹೊಂದಿ, ಉಳ್ಳಾಲ, ಪುತ್ತೂರು, ಬಂಟ್ವಾಳ ಮುಂತಾದೆಡೆ ಸೇವೆ ಸಲ್ಲಿಸಿದ್ದರು. 20016ರಲ್ಲಿ ಡಿವೈಎಸ್ಪಿ ಆಗಿ ಅವರು ಭಡ್ತಿ ಹೊಂದಿದ್ದರು. ಇದಕ್ಕೂ ಮುನ್ನ ಅವರು ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಂಗಳೂರಿನಲ್ಲಿ ಚರ್ಚ್ ದಾಳಿ ಘಟನೆ ಸಂದರ್ಭ ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದರು. ಆ ಬಳಿಕ ಬೆಂಗಳೂರಿಗೆ ವರ್ಗಾವಣೆ ಗೊಂಡಿದ್ದ ಅವರು ಇತ್ತೀಚೆಗೆ ಡಿವೈಎಸ್ಪಿ ಆಗಿ ಭಡ್ತಿ ಹೊಂದಿ ಮಂಗಳೂರಿನ ಪಶ್ಚಿಮ ವಲಯದ ಐಜಿಪಿ ಕಚೇರಿಗೆ ನಿಯುಕ್ತಿಗೊಂಡಿದ್ದರು. ನಿವೃತ್ತಿಗೆ ಇನ್ನೂ 9 ವರ್ಷ ಬಾಕಿಯಿತ್ತು.