ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಯಾವತ್ತಿಗೂ ಬಾರದಂತೆ ಎಚ್ಚರಿಕೆ ವಹಿಸಲು 2,000 ಕೋ. ರೂ.ಗಳ ಶಾಶ್ವತ ನೀರಾವರಿ ಯೋಜನೆ ಜಾರಿ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸಲಾಗುವುದು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ'ಸೋಜಾ ಹೇಳಿದರು.ಗುರುವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.ಜಿ. ಕೊಡ್ಗಿ ಅವರು ಅಧಿಕಾರದಲ್ಲಿದ್ದಾಗ ಕರಾವಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಸಮಗ್ರ ವರದಿ ತಯಾರಿಸಿದ್ದರು. ಇದರ ಜಾರಿಗೆ ಸಂಬಂಧಿಸಿ ವಿಶೇಷ ಒತ್ತು ನೀಡಲಾಗುವುದು ಎಂದು ವಿವರಿಸಿದರು.ಅಧಿವೇಶನವನ್ನು ವರ್ಷದಲ್ಲಿ 100 ದಿನ ನಡೆಸುವಂತೆ ನಿಯಮಗಳಿವೆ. ಕಳೆದ ವರ್ಷ 60 ದಿನ ನಡೆದಿದೆ.
ಈ ವರ್ಷ 100 ದಿನ ಅಧಿವೇಶನ ನಡೆಸುವುದಕ್ಕೆ ಒತ್ತು ನೀಡಲಾಗುವುದು. ಆಡಳಿತ ಹಾಗೂ ವಿಪಕ್ಷದವರು ಜತೆಯಾಗಿ ಚರ್ಚಿಸಿ ಅಭಿವೃದ್ಧಿ ಯೋಜನೆಗಳನ್ನು ತಯಾರಿಸಿ, ರಾಜ್ಯದ ಸಮಗ್ರ ಅಭಿವೃದ್ಧಿಯ ಗುರಿ ಹೊಂದಲಾಗಿದೆ. ಶ್ರದ್ಧೆ ಹಾಗೂ ನಿಷ್ಪಕ್ಷಪಾತಿಯಾಗಿ ನನ್ನ ಜವಾಬ್ದಾರಿ ನಿರ್ವಹಿಸಲಿದ್ದೇನೆ. ನಮ್ಮ ಸದಸ್ಯರನ್ನು ಸದನಕ್ಕೆ ಕರೆತಂದು ಚರ್ಚೆಯಲ್ಲಿ ಭಾಗವಹಿಸುವಂತೆ ಮಾಡಿ ಎಲ್ಲರನ್ನು ಸರಕಾರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ನನ್ನ ಮೇಲೆ ವಿಶ್ವಾಸವಿರಿಸಿ ಈ ಸ್ಥಾನ ನೀಡಿದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ನ ಸರ್ವರಿಗೂ ಕೃತಜ್ಞತೆಗಳು ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮೊದಲಾದವರು ಉಪಸ್ಥಿತರಿದ್ದರು.