ಮಂಗಳೂರು: ಮಡಿಕೇರಿಯ ಲಾಡ್ಜೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಎಂ.ಕೆ.ಗಣಪತಿ ಅವರು ಕಾರ್ಯನಿರ್ವಹಿಸುತ್ತಿದ್ದ ಮಂಗಳೂರು ಪಶ್ಚಿಮ ವಲಯ ಐಜಿಪಿ ಕಚೇರಿಗೆ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ ತಂಡ ಶನಿವಾರ ಸಂಜೆ ಭೇಟಿ ನೀಡಿ ಕಚೇರಿಯ ಕಡತಗಳನ್ನು ಪರಿಶೀಲನೆ ನಡೆಸಿದ್ದು, ಯಾವುದೇ ಮಹತ್ವದ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.ಎಂ.ಕೆ.ಗಣಪತಿ ಆತ್ಮಹತ್ಯೆಯ ಬಳಿಕ ಡಿವೈಎಸ್ಪಿ ಕಚೇರಿಗೆ ಬೀಗಮುದ್ರೆ ಹಾಕಲಾಗಿದ್ದು, ಅದನ್ನು ಶನಿವಾರ ಎಡಿಜಿಪಿಯ ನೇತೃತ್ವದಲ್ಲಿ ತೆರೆಯಲಾಗಿದೆ. ಈ ಸಂದರ್ಭದಲ್ಲಿ ಸಿಐಡಿಯ ಮಂಗಳೂರು ಅಧಿಕಾರಿಗಳು ಉಪಸ್ಥಿತರಿದ್ದರು.
ಗಣಪತಿ ಅವರ ಕಚೇರಿ ಪರಿಶೀಲನೆ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಪ್ರತಾಪ್ ರೆಡ್ಡಿ, ಈ ಪ್ರಕರಣದ ಸಂಪೂರ್ಣ ತನಿಖೆಯ ಅನಂತರ ಗೃಹ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದರು. ಎಂ.ಕೆ.ಗಣಪತಿ ಅವರ ಕುಟುಂಬ ಆಘಾತದಿಂದ ಹೊರಬಂದ ಬಳಿಕ ಅವರ ಕುಟುಂಬದ ತನಿಖೆಯೂ ನಡೆಸಲಾಗುತ್ತದೆ. ಈ ಆತ್ಮಹತ್ಯೆ ಪ್ರಕರಣ ಶುಕ್ರವಾರ ಸಿಐಡಿಗೆ ಹಸ್ತಾಂತರವಾಗಿದ್ದು, ಸಿಐಡಿ ಐಜಿಯವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಸಿಐಡಿ ಐಜಿಪಿ ಹೇಮಂತ್ ನಿಂಬಾಳ್ಕರ್ ತಂಡ ಮಡಿಕೇರಿಯಲ್ಲಿ ತನಿಖೆ ನಡೆಸುತ್ತಿದೆ. ತನಿಖೆಯ ಸಮಯ ಬಹಳಷ್ಟು ಪುರಾವೆಗಳನ್ನು ಸಂಗ್ರಹಿಸಲಾಗಿದ್ದು, ಎಲ್ಲ ನೆಲೆಯಲ್ಲಿ ತನಿಖೆ ಮಾಡಲಾಗುತ್ತಿದೆ. ಗಣಪತಿಯವರು ಮಂಗಳೂರಿನಲ್ಲಿ ವಾಸ್ತವ್ಯವಿದ್ದು, ಪಶ್ಚಿಮ ವಲಯ ಐಜಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದುದ್ದರಿಂದ ಇಲ್ಲಿಗೆ ಪರಿಶೀಲನೆಗೆ ಬಂದಿದ್ದೇವೆ ಎಂದರು.