ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇ ವಿಸ್ತರಣೆಗೆ ಭೂಮಿ ಹೊಂದಿಸಿ ಕೊಡಲು ರಾಜ್ಯ ಸರಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಆಗ್ರಹಿಸಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣ ರನ್ವೇ ವಿಸ್ತರಣೆ ಕನಸು ಹಲವು ವರ್ಷದಿಂದ ಬಾಕಿ ಉಳಿದಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಿರುವುದರಿಂದ ಪ್ರಯಾಣಿಕರ ಸುರಕ್ಷಾ ದೃಷ್ಟಿಯಲ್ಲೂ ಕೂಡ ಇದರ ವಿಸ್ತರಣೆ ಅಗತ್ಯವಾಗಿ ನಡೆಯಬೇಕು ಎಂದರು.ಮಂಗಳೂರು ವಿಮಾನನಿಲ್ದಾಣಕ್ಕೆ ಕೆಎಸ್ಆರ್ಟಿಸಿ ಬಸ್ ಸಂಪರ್ಕ, ಹೆಚ್ಚುವರಿಯಾಗಿ ಹೊಸ ವಿಮಾನಗಳ ಹಾರಾಟ, ವಿಮಾನ ನಿಲ್ದಾಣ ಸಂಪರ್ಕಿ ಸುವ ಮರಕಡ ರಸ್ತೆ ಅಭಿವೃದ್ಧಿ ನಡೆಸುವಂತೆ ಸಲಹಾ ಸಮಿತಿಯಿಂದ ಆಗ್ರಹ ವ್ಯಕ್ತವಾಯಿತು.
ಈ ಸಂದರ್ಭ ಶಾಸಕ ಅಭಯಚಂದ್ರ ಜೈನ್, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ, ಮಂಗಳೂರು ಪಾಲಿಕೆ ಆಯುಕ್ತ ಡಾ| ಎಚ್.ಎನ್. ಗೋಪಾಲಕೃಷ್ಣ, ಕೆನರಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರಾಮ್ಮೋಹನ್ ಪೈ ಮಾರೂರು, ಏರ್ಇಂಡಿಯಾ ಎಕ್ಸ್ಪ್ರೆಸ್ ಸ್ಟೇಷನ್ ಮ್ಯಾನೇಜರ್ ನಾಗೇಶ್ ಶೆಟ್ಟಿ, ಸ್ಪೈಸ್ ಜೆಟ್ ಸ್ಟೇಷನ್ ಮ್ಯಾನೇಜರ್ ಬಿದ್ದಪ್ಪ ಮೊದಲಾದವರು ಉಪಸ್ಥಿತರಿದ್ದರು.