ಮುಂಬಯಿ (ಮಂಗಳೂರು), ಜು.13: ಬಹು ನಿರೀಕ್ಷೆಯ `ದಬಕ್ ದಬಾ ಐಸಾ’ ಸಿನಿಮಾವು ಆಗಸ್ಟ್ 5ರಂದು ತೆರೆ ಕಾಣಲಿದ್ದು, ಕೆಲವು ಸಮಯದಿಂದ ಮಂಕು ಬಡಿದಂತಿರುವ ಕೋಸ್ಟಲ್ವುಡ್ನಲ್ಲಿ ಮತ್ತೆ ಹೊಸ ಸಂಚಲನ ಮೂಡಿಸಲಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಈ ಸಿನಿಮಾವು ಮತ್ತೊಂದು ಹೊಸ ದಾಖಲೆಯತ್ತ ತುಳು ಚಿತ್ರರಂಗವನ್ನು ಕೊಂಡೊಯ್ಯಲು ಸಮರ್ಥವಿರುವ ಚಿತ್ರವಾಗಿದೆ.
ಜಯಕಿರಣ ಫಿಲಂಸ್ನಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವು ತನ್ನ ಹಿರಿಯ ಸೋದರ ಚಾಲಿಪೋಲಿಲು ಅನ್ನು ಹಿಂದಿಕ್ಕುವ ರೀತಿಯಲ್ಲಿ ಮೂಡಿ ಬಂದಿದೆ. ಪ್ರಕಾಶ್ ಪಾಂಡೇಶ್ವರ ಅವರ ಚೊಚ್ಚಲ ನಿರ್ದೇಶನವಿರುವ 'ದಬಕ್ ದಬ ಐಸಾ'ವು ಸಂಪೂರ್ಣ ಹಾಸ್ಯಮಯ ಹಾಗೂ ಉತ್ತಮ ಸಾಮಾಜಿಕ ಸಂದೇಶವಿರುವ ಚಿತ್ರವಾಗಿದ್ದು, ಕುಟುಂಬ ಸಮೇತ ವೀಕ್ಷಿಸುವಂಥ ಸಿನಿಮಾ ಆಗಿದೆ.
ತುಳು ಚಿತ್ರರಂಗದಲ್ಲೇ 511 ದಿನಗಳ ಪ್ರದರ್ಶನ ಕಾಣುವ ಮೂಲಕ ಒಂದು ಅದ್ಭುತ ದಾಖಲೆ ಬರೆದಿರುವ ‘ಚಾಲಿಪೋಲಿಲು’ ತಂಡದ ಹೆಚ್ಚಿನೆಲ್ಲ ಕಲಾವಿದರು ಈ ಚಿತ್ರದಲ್ಲೂ ಇದ್ದಾರೆ. ಉತ್ಪಲ್ ನಾಯನಾರ್ ಅವರ ಕೆಮರಾ ಕೈಚಳಕ `ದಬಕ್ ದಬಾ ಐಸಾ’ದಲ್ಲೂ ಮುಂದುವರಿದಿದೆ. ಆದ್ದರಿಂದ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗಿಲ್ಲ.
ಈ ಚಿತ್ರದಲ್ಲಿ ಒಟ್ಟು ನಾಲ್ಕು ಸುಂದರ ಹಾಡುಗಳಿದ್ದು, ಅವುಗಳ ದೃಶ್ಯಗಳನ್ನು ಆಕರ್ಷಕವಾಗಿ ಸೆರೆಹಿಡಿಯಲಾಗಿದೆ. ಈ ಪೈಕಿ ಹಾರ್ಟ್ದ ಬಸ್ ಮೋಕೆಡ್ ರಶ್, ಕ್ಷಣ ಕ್ಷಣ ಮತ್ತು ದಬಕ್ ದಬಾ ಹಾಡುಗಳು ಈಗಲೇ ಎಲ್ಲರ ಬಾಯಲ್ಲೂ ಗುನುಗುಟ್ಟಿತ್ತಿವೆ. ಕೇಳಿದ ಕೂಡಲೇ ಎಲ್ಲರನ್ನು ಸೆಳೆಯುವಂಥ ಶಕ್ತಿ ಹೊಂದಿರುವ ಈ ಹಾಡುಗಳ ಸೀಡಿಗಳು ಭರ್ಜರಿ ಮಾರುಕಟ್ಟೆ ಗಳಿಸಿರುವುದು ಇದಕ್ಕೊಂದು ಉತ್ತಮ ಉದಾಹರಣೆ. ಮಂಗಳೂರಿನ ಪ್ರತಿಭೆ, ರಾಜೇಶ್ ಎಂ. ಮಂಗಳೂರು ಅವರಿಗೆ ಈ ಚಿತ್ರದಲ್ಲಿ ಸಂಗೀತ ಅವಕಾಶ ನೀಡಲಾಗಿರುವುದು ಮತ್ತೊಂದು ಪ್ಲಸ್ ಪಾಯಿಂಟ್.
ಈಚೆಗೆ ಬಿಡುಗಡೆಯಾಗಿದ್ದ ಕೆಲವು ತುಳು ಸಿನಿಮಾಗಳು ಪ್ರೇಕ್ಷಕರಲ್ಲಿ ಭ್ರಮನಿರಸನ ಮೂಡಿಸಿದ್ದು, ತುಳು ಚಿತ್ರಗಳ ಬಗ್ಗೆ ಮತ್ತೆ ಬೇಸರ ಮೂಡುವಂಥ ವಾತಾವರಣ ಸೃಷ್ಟಿಯಾಗಲು ಕಾರಣವಾಗಿವೆ. ಪ್ರೇಕ್ಷಕರೆಲ್ಲರೂ 'ದಬಕ್ ದಬ ಐಸಾ' ಯಾವಾಗ ಬಿಡುಗಡೆಯಾಗುತ್ತದೋ ಎಂದು ಕಾದು ನಿಂತಿದ್ದು, ಅವರೆಲ್ಲರೂ ಈ ಸಿನಿಮಾದ ಮೇಲೆ ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಪ್ರಮುಖವಾದ ಕಾರಣ ಹಿಂದಿನ ?ಚಾಲಿಪೆÇೀಲಿಲು? ಸಾಧನೆ. ಅದೇ ತಂಡದಿಂದ ಹೊರ ಬರುತ್ತಿರುವ 'ದಬಕ್ ದಬಾ ಐಸಾ'ವು ಅದನ್ನು ಮೀರಿಸುವಂಥ ಸಿನಿಮಾ ಆಗಿರಲಿದೆ ಎಂಬ ವಿಶ್ವಾಸವೂ ಪ್ರೇಕ್ಷಕರಲ್ಲಿದೆ. ಅದನ್ನು ಚಿತ್ರತಂಡವೂ ಅರಿತಿದ್ದು, ಅವೆಲ್ಲವನ್ನೂ ಗಮನದಲ್ಲಿರಿಸಿಕೊಂಡೇ ಸಿನಿಮಾ ತಯಾರಿಸಲಾಗಿದೆ. ಸುಮಾರು 2.10 ತಾಸು ಪ್ರೇಕ್ಷಕರಿಗೆ ಸಖತ್ ಮನೋರಂಜನೆ ನೀಡುವಲ್ಲಿ ದಬಕ್ ದಬಾ ಐಸಾ ಸಕ್ಸಸ್ ಆಗಲಿದೆ ಎಂಬ ವಿಶ್ವಾಸವನ್ನು ನಿರ್ಮಾಪಕ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ವ್ಯಕ್ತಪಡಿಸುತ್ತಾರೆ.
ಕರಾವಳಿಯಾದ್ಯಂತ ಏಕ ಕಾಲದಲ್ಲಿ ತೆರೆಗೆ
ಜಯಕಿರಣ ಫಿಲಂಸ್ ನಿರ್ಮಾಣದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ನಿರ್ದೇಶನದಲ್ಲಿ ತಯಾರಾದ `ದಬಕ್ ದಬಾ ಐಸ' ತುಳು ಚಲನ ಚಿತ್ರ ಆಗಸ್ಟ್ 5ರಂದು ಕರಾವಳಿ ಜಿಲ್ಲೆಯಾದ್ಯಂತ ಏಕ ಕಾಲದಲ್ಲಿ ತೆರೆಕಾಣಲಿದೆ. ಶಶಿರಾಜ್ ಕಾವೂರು ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣ:ಉತ್ಪಲ್ ನಯನಾರ್, ಸಂಗೀತ: ರಾಜೇಶ್ ಎಂ.ಮಂಗಳೂರು, ಕಲೆ: ತಮ್ಮ ಲಕ್ಷ್ಮಣ್, ಚಿತ್ರದಲ್ಲಿ ಒಟ್ಟು 4 ಹಾಡು ಇದ್ದು ದೇವದಾಸ್ ಕಾಪಿಕಾಡ್, ಕದ್ರಿ ನವನೀತ ಶೆಟ್ಟಿ, ವೀರೇಂದ್ರ ಶೆಟ್ಟಿ ಕಾವೂರು, ಶಶಿರಾಜ್ ಕಾವೂರು ಸಾಹಿತ್ಯ ಒದಗಿಸಿದ್ದಾರೆ.
‘ಚಾಲಿಪೋಲಿಲು’ ತುಳು ಚಲನ ಚಿತ್ರದ ಬಳಿಕ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ ಜತೆಯಾಗಿ ಅಭಿನಯಿಸಿದ್ದಾರೆ. ಮೊದಲ ಬಾರಿಗೆ ಶೀತಲ್ ಈ ಚಿತ್ರದ ಮೂಲಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಡಾ.ಹನ್ಸರಾಜ್ ಆಳ್ವ, ಮತ್ತು ಪತ್ರಕರ್ತ ಮನೋಹರ್ ಪ್ರಸಾದ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನುಳಿದಂತೆ ಲಕ್ಷ್ಮಣ್ ಕುಮಾರ್ ಮಲ್ಲೂರು, ಸುರೇಂದ್ರ ಬಂಟ್ವಾಳ, ಗಿರೀಶ್ ಶೆಟ್ಟಿ ಕಟೀಲು , ಸುಧೀರ್ ರಾಜ್ ಉರ್ವಾ, ಸರೋಜಿನಿ ಶೆಟ್ಟಿ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸತೀಶ್ ಬಂದಲೆ, ರವಿಸುರತ್ಕಲ್,ಶೋಭಾ ಶಕ್ತಿನಗರ, ಸುಜಾತ ಶಕ್ತಿನಗರ, ಪ್ರಶಾಂತ್ ಕೊಂಚಾಡಿ, ಸದಾಶಿವದಾಸ್, ಮೋಹನ್ ಕೊಪ್ಪಲ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಮನೋಹರ್ ಶೆಟ್ಟಿ ಸುರತ್ಕಲ್, ಯಶವಂತ್ ಶೆಟ್ಟಿ ಕೃಷ್ಣಾಪುರ, ಚೇತಕ್ ಪೂಜಾರಿ, ವಿನೋದ್, ಸೋಮು ಜೋಗಟ್ಟೆ, ಚಂದ್ರಹಾಸ ಕದ್ರಿ, ಪಿ.ಬಿ.ಹರೀಶ್ ರೈ, ನರೇಶ್ ಕುಮಾರ್ ಸಸಿಹಿತ್ಲು, ಶಶಿಧರ ಬೆಳ್ಳಾಯರು, ಸುನೀಲ್ ಕೃಷ್ಣಾಪುರ, ಪ್ರವೀಣ್ ನೀರ್ಮಾರ್ಗ, ರವೀಂದ್ರ ಶೆಟ್ಟಿ ಕುತ್ತೆತ್ತೂರು, ವಿನಯ ಕೃಷ್ಣ , ಬೃಜೇಶ್ ಗರೋಡಿ, ರಾಜೇಶ್ ಶೆಟ್ಟಿ ಮೊದಲಾದವರು ಚಿತ್ರದಲ್ಲಿದ್ದಾರೆ. ಮಧು ಸುರತ್ಕಲ್ ತಾಂತ್ರಿಕ ನಿರ್ದೇಶಕರಾಗಿ, ಶಶಿರಾಜ್ ಕಾವೂರು ಕ್ರಿಯೇಟಿವ್ ನಿರ್ದೇಶಕರಾಗಿ, ರಾಮ್ದಾಸ್ ಸಸಿಹಿತ್ಲು, ಕಿಶೋರ್ ಮೂಡಬಿದ್ರೆ ಸಹ ನಿರ್ದೇಶಕರಾಗಿ ದುಡಿದಿದ್ದಾರೆ.
ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ತಯಾರಾದ 'ದಬಕ್ ದಬಾ ಐಸಾ' ಚಿತ್ರ 21 ದಿನಗಳ ಕಾಲ ಒಂದೇ ಹಂತದಲ್ಲಿ ಮಂಗಳೂರು ಸುತ್ತಮುತ್ತ ಹಾಗೂ ಸುರತ್ಕಲ್, ಬೋಂದೆಲ್, ಶಕ್ತಿನಗರದಲ್ಲಿ ಚಿತ್ರೀಕರಣ ನಡೆದಿದೆ. ದಬಕ್ ದಬಾ ಐಸ ಚಿತ್ರ ಸಂಪೂರ್ಣ ಹಾಸ್ಯ ಚಿತ್ರವಾಗಿದ್ದು, ಸಿನಿಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅಂಶಗಳಿವೆ ಎಂದು ನಿರ್ದೇಶಕ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ.