ಬದುಕಿನ ನಿರ್ವಹಣೆಗೆ ಜ್ಞಾನ ಅತ್ಯವಶ್ಯ : ವಜ್ರದೇಹಿ ಸ್ವಾಮಿ
ಮಂಗಳೂರು, ಜು. 13 : ಮನುಷ್ಯನ ಬದುಕಿನ ನಿರ್ವಹಣೆಗೆ ಜ್ಞಾನ ಅತ್ಯವಶ್ಯ. ಮನುಷ್ಯ ಜೀವನದಲ್ಲಿ ಸಾಧನೆಯೂ ಒಳಗೊಂಡಿರಬೇಕು. ಮಕ್ಕಳಿಗೆ ಶಿಕ್ಷಣದಲ್ಲಿ ಸಂಸ್ಕಾರ ನೀಡಬೇಕು. ಸಂಸ್ಕಾರ ನೀಡದೆ ಮಕ್ಕಳು ಬೆಳೆದರೆ ಭವಿಷ್ಯದಲ್ಲಿ ಅವರ ನಿಯಂತ್ರಣ ನಮ್ಮ ಕೈಯಲ್ಲಿರುವುದಿಲ್ಲ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಹೇಳಿದರು.
ಗುರುಪುರ ಬಂಟರ ಮಾತೃ ಸಂಘದ ವತಿಯಿಂದ ಮೊನ್ನೆ ಗುರುಪುರ ಕುಕ್ಕುದಕಟ್ಟೆಯ ವೈದ್ಯನಾಥ ಸಮುದಾಯ ಭವನದಲ್ಲಿ ಆಯೋಜಿಲಾಗಿದ್ದ ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾದ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದ ಅವರು, ನಮ್ಮ ದೇಶದ ಜ್ಞಾನ ಭಂಡಾರ ದೊಡ್ಡದಿದೆ. ಮಕ್ಕಳಲ್ಲಿ ಸಾಧನೆಯ ತುಡಿತವಿರಬೇಕು ಎಂದರು.
ಗುರುಪುರ ಬಂಟರ ಮಾತೃ ಸಂಘದ ಈ ಕೆಲಸ ನಿಜಕ್ಕೂ ಶ್ಲಾಘನೀಯವಾಗಿದೆ. ನಮ್ಮ ಮಕ್ಕಳಿಗೆ ಆಸಕ್ತಿ ಕ್ಷೇತ್ರದಲ್ಲಿ ಉತ್ತೇಜನ ನೀಡಿದರೆ, ಉನ್ನತ ಶಿಕ್ಷಣದೊಂದಿಗೆ ಊರಲ್ಲೇ ಉತ್ತಮ ವೇತನದ ಕೆಲಸದೊಂದಿಗೆ ಆರಾಮವಾಗಿರಲು ಸಾಧ್ಯವಿದೆ. 10-15 ಸಾವಿರ ರೂ ಸಿಗುವ ವೇತನಕ್ಕಾಗಿ ವಿದೇಶಕ್ಕೆ ಹೋಗುವ ಪ್ರಮೇಯ ತಪ್ಪಲಿದೆ. ಮಕ್ಕಳಿಗೆ ಕೃಷಿಯ ಮಹತ್ವ ತಿಳಿಸಿ ಹೇಳಬೇಕು ಎಂದು ಮುಖ್ಯ ಅತಿಥಿ, ಉದ್ಯಮಿ ರಾಜೇಶ್ ನಾಯ್ಕ್ ಅಭಿಪ್ರಾಯಪಟ್ಟರು.
ಕಷ್ಟದಲ್ಲಿರುವವರು ಮತ್ತು ಅರ್ಹರಿಗೆ ನೆರವಾಗುವುದು ಒಳ್ಳೆಯ ಕೆಲಸ. ಹಿಂದಿನವರು ಈ ಕೆಲಸ ಮಾಡಿದ್ದು, ಇದನ್ನು ನಾವೆಲ್ಲರು ಮುಂದುವರಿಸಬೇಕು. ಬಂಟರು ಹಂಚಿ ತಿನ್ನುವವರು. ಆದರೆ ಈಗ ಅವರಲ್ಲೂ ಸ್ವಾರ್ಥ ಭಾವನೆ ಹೆಚ್ಚಾಗಿದೆ. ಸಮಾಜದ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಕೆಲಸ ನಿರಂತರವಾಗಿರಲಿ ಮತ್ತು ಇದರಲ್ಲಿ ಸಮಾಜ ಬಂಧುಗಳು ಕೈಜೋಡಿಸಬೇಕೆಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಯರಾಮ ರೈ, ಉಷಾ ಶೆಟ್ಟಿ (ಮುಖ್ಯೋಪಾಧ್ಯಾಯಿನಿ, ರಾಮಕೃಷ್ಣ ಫ್ರೌಢಶಾಲೆ ಬಂಟ್ಸ್ ಹಾಸ್ಟೆಲ್) ಮಾತನಾಡಿದರು. ಒಟ್ಟು 223 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಉಳಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಮುಂದಿನ ಸಭೆಯಲ್ಲಿ ನಾಲ್ಕು ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡುವುದಾಗಿ ಸಂಘದ ಪದಾಧಿಕಾರಿ ಸುದರ್ಶನ ಶೆಟ್ಟಿ ಪೆರ್ಮಂಕಿ ತಿಳಿಸಿದರು. ಸಭೆಯಲ್ಲಿ ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ, ಸತ್ಯಾನಂದ ಶೆಟ್ಟಿ, ಪುರುಷೋತ್ತಮ ಮಲ್ಲಿ, ನಳಿನಿ ಶೆಟ್ಟಿ, ಉಮೇಶ್ ಮುಂಡ, ಉಮೇಶ್ ರೈ ಮೇಗಿನಮನೆ, ಲಯನ್ ಕಿಶೋರ್ ಶೆಟ್ಟಿ, ಶಿವಣ್ಣ ಶೆಟ್ಟಿ ಮೊದಲಾದವರಿದ್ದರು. ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.