ಮಂಗಳೂರು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬ್ಲಾಕ್ ಮಟ್ಟದ ಪ್ರತಿನಿಧಿಗಳ ಸಮಾವೇಶ ಜು. 16ರಂದು ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಶಾಸಕ ಜೆ.ಆರ್. ಲೋಬೊ ತಿಳಿಸಿದ್ದಾರೆ.ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಸಮಾವೇಶದಲ್ಲಿ ಸುಮಾರು 3 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಸಂವಿಧಾನಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಹುಟ್ಟುಹಬ್ಬದ ಸಂಭ್ರಮ "ಅಂಬೇಡ್ಕರ್ ಜಯಂತ್ಯುತ್ಸವ' ವನ್ನು ಈ ವೇಳೆ ಆಯೋಜಿಸಲಾಗಿದೆ. ಬದಲಾವಣೆಯ ಹರಿಕಾರ ಬ್ಲೇಸಿಯಸ್ ಎಂ. ಡಿ'ಸೋಜಾ ಅವರ "ನೆನಪು ನಮನ' ಕಾರ್ಯಕ್ರಮ, ರಾಜ್ಯ ಸರಕಾರದ 3 ವರ್ಷಗಳ ಸಾಧನೆಗಳ ಪಕ್ಷಿನೋಟ, ನೆಹರೂ-ಅಂಬೇಡ್ಕರ್ ಅವರ ಅಧ್ಯಯನ ಕಮ್ಮ ಟದ ಚಾಲನೆ ಕಾರ್ಯಕ್ರಮಗಳನ್ನು ಈ ವೇಳೆ ಹಮ್ಮಿಕೊಳ್ಳಲಾಗಿದೆ ಎಂದರು.ಸಮಾವೇಶಕ್ಕೆ ಮುನ್ನ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಲ್ಮಠ ಕೆನರಾ ಬ್ಯಾಂಕ್ ವೃತ್ತದಿಂದ ಬೆಂದೂರ್ವೆಲ್ ಕರಾವಳಿ ವೃತ್ತದ ವರೆಗಿನ ರಸ್ತೆಗೆ "ಬ್ಲೇಸಿಯಸ್ ಎಂ. ಡಿ'ಸೋಜಾ ರಸ್ತೆ' ಎಂದು ನಾಮಕರಣ ಮಾಡಲಾಗುವುದು ಎಂದು ಲೋಬೊ ತಿಳಿಸಿದರು.