ಮಂಗಳೂರು: ಪಿಲಿಕುಳ ಡಾ| ಶಿವರಾಮ ಕಾರಂತ ನಿಸರ್ಗಧಾಮದ ಮೃಗಾಲಯಕ್ಕೆ ದಾನಿಗಳ ಸಹಕಾರ ಪಡೆದು ಮಧ್ಯ ಆಫ್ರಿಕಾದಿಂದ ಜಿರಾಫೆ, ಝಿಬ್ರಾ ಹಾಗೂ ಚಿಂಪಾಂಜಿಗಳನ್ನು ಆಮದು ಮಾಡಿಕೊಳ್ಳುವ ಕುರಿತು ಚಿಂತನೆ ನಡೆದಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರಾಣಿಗಳಿಗೆ ಒಟ್ಟು ಸುಮಾರು 1.75 ಕೋ. ರೂ.ವೆಚ್ಚವಾಗಲಿದ್ದು, ಸಹಕಾರಕ್ಕಾಗಿ ಈಗಾಗಲೇ ಕೆಲವೊಂದು ಕಾರ್ಪೊರೇಟ್ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ. ಜಿರಾಫೆಗೆ 75 ಲಕ್ಷ ರೂ., ಝಿಬ್ರಾ ಹಾಗೂ ಚಿಂಪಾಂಜಿಗೆ ತಲಾ 50 ಲಕ್ಷ ರೂ. ವೆಚ್ಚವಿದೆ.ಪ್ರಸ್ತುತ ಪಿಲಿಕುಳದಲ್ಲಿ 120 ಜಾತಿಯ ಒಟ್ಟು 1,200 ಪ್ರಾಣಿ, ಪಕ್ಷಿ, ಉರಗಗಳಿವೆ. ಇಲ್ಲಿನ ಪ್ರಾಣಿಗಳನ್ನು ವಿನಿಮಯ ಮಾಡುವ ಕುರಿತು ಕೂಡ ಪ್ರಯತ್ನ ನಡೆದಿದೆ. ಆಫ್ರಿಕಾದಿಂದ ಜೋಡಿ ಪ್ರಾಣಿಗಳನ್ನು ತರುವುದರಿಂದ ಎಲ್ಲವನ್ನೂ ಒಟ್ಟಿಗೆ ತರುವಂತಿಲ್ಲ. ಆಮದು ಕಾರ್ಯ ಸುಸೂತ್ರವಾಗಿ ನಡೆದರೆ ಮುಂದಿನ 6 ತಿಂಗಳಲ್ಲಿ ಈ ಪ್ರಾಣಿಗಳು ಪಿಲಿಕುಳ ತಲುಪಲಿವೆ ಎಂದರು.
ಜು. 16-17: ಹಲಸು ಮೇಳ
ನಿಸರ್ಗಧಾಮದಲ್ಲಿ ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜು. 16 ಮತ್ತು 17ರಂದು ಬೃಹತ್ ಹಲಸು ಮೇಳ-2016 ನಡೆಯಲಿದೆ. ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳ ಹಲಸು ಬೆಳೆಗಾರರು ಭಾಗವಹಿಸಲಿದ್ದು, 55 ಮಳಿಗೆಗಳಿಗೆ ಉಚಿತ ಅವಕಾಶ ಕಲ್ಪಿಸಲಾಗಿದೆ. ಮೇಳವನ್ನು ಮಂಗಳೂರು ವಿ.ವಿ. ಕುಲಪತಿ ಕೆ. ಬೈರಪ್ಪ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕರಾದ ಕೆ. ಅಭಯಚಂದ್ರ ಜೈನ್, ಮೊದಿನ್ ಬಾವಾ ಭಾಗವಹಿಸಲಿದ್ದಾರೆ ಎಂದರು.