ಮಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆ.ಜೆ. ಜಾರ್ಜ್ ಅವರ ಯಾವುದೇ ಪಾತ್ರವಿಲ್ಲ ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ. ಜಾರ್ಜ್ ಅವರು ಗಣಪತಿಯವರಿಗೆ ಕಿರುಕುಳ ನೀಡಿದ್ದಾರೆ ಎಂಬುದಾಗಿ ಬಿಜೆಪಿ ಅವರ ಬಳಿ ಯಾವುದೇ ಪುರಾವೆಗಳಿದ್ದರೆ ನೀಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನ ಸರ್ಕಿಟ್ ಹೌಸ್ನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಗಣಪತಿ ಪ್ರಕರಣ ಮುಚ್ಚಿ ಹಾಕಲು ಸರಕಾರ ಪ್ರಯತ್ನಿಸುತ್ತಿಲ್ಲ. ಸರಕಾರ ಸದನದಲ್ಲಿ ಉತ್ತರಿಸಿದೆ. ತನಿಖೆ ನಡೆಯುತ್ತಿದೆ. ಜಾರ್ಜ್ ಕಿರುಕುಳ ನೀಡಿದ್ದಾರೆ ಅಥವಾ ಅವರ ಕರ್ತವ್ಯದಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ ಎಂಬ ಬಗ್ಗೆ ಬಿಜೆಪಿಯವರಲ್ಲಿ ದಾಖಲೆಗಳಿದ್ದರೆ ನೀಡಲಿ ಎಂದರು.
ಗಣಪತಿ ಅವರನ್ನು ದ.ಕ.ದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಳಿಸುವಂತೆ ಸಚಿವ ಖಾದರ್ ಹಾಗೂ ಶಾಸಕ ಮೊದೀನ್ ಬಾವಾ ಕೋರಿದ್ದರು ಎಂಬ ಪ್ರಶ್ನೆಗೆ ಉತ್ತರಿಸಿದ ಬಾವಾ, ದಕ್ಷ ಅಧಿಕಾರಿಯಾಗಿದ್ದ ಅವರನ್ನು ಸುರತ್ಕಲ್ ಠಾಣೆಗೆ ನಿಯೋಜಿಸುವಂತೆ ನಾನು ಕೋರಿದ್ದು ನಿಜ. ಆದರೆ ಆಗ ಅವರು ಬೆಂಗಳೂರಿನಲ್ಲಿ ಕರ್ತವಕ್ಕೆ ಹಾಜರಾಗಿದ್ದರು ಎಂದರು.ಖಾದರ್ ಉತ್ತರಿಸಿ ಬಿಜೆಪಿ ಅಧಿಕಾರ ದಲ್ಲಿದ್ದ ಅವಧಿಯಲ್ಲಿ ಕೊಣಾಜೆಯಲ್ಲಿ ಬಿಜೆಪಿಗೆ ಸೇರಿದ ವ್ಯಕ್ತಿಯೋರ್ವರ ಮೇಲೆ ಕ್ರಮಕೈಗೊಂಡಿದ್ದರು ಎಂಬ ಕಾರಣಕ್ಕೆ ವರ್ಗಾವಣೆ ಮಾಡಲಾಗಿತ್ತು ಎಂದು ಅವರು ಹೇಳಿದರು.