ಮಂಗಳೂರು: ಮೆಸ್ಕಾಂ ವ್ಯಾಪ್ತಿಗೆ ನೂತನವಾಗಿ ನೇಮಕಗೊಂಡ 2,308 ಲೈನ್ಮ್ಯಾನ್ಗಳು, ಸಹಾಯಕ/ಕಿರಿಯ ಎಂಜಿನಿಯರ್ಗಳು ದ.ಕ. ಜಿಲ್ಲೆಯ ಜನರಂತೆ ಶಿಸ್ತು ಮೈಗೂಡಿಸಿಕೊಂಡು, ಸಾರ್ವಜನಿಕರಿಗೆ ಯಾವುದೇ ಲೋಪವಾಗದಂತೆ, ಉತ್ತಮ ಸೇವೆ ನೀಡಬೇಕು ಎಂದು ರಾಜ್ಯದ ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ.ಮೆಸ್ಕಾಂ ಮತ್ತು ಕೆಪಿಟಿಸಿಎಲ್ ನೇತೃತ್ವದಲ್ಲಿ ನೂತನವಾಗಿ ನೇಮಕರಾದ ಅಧಿಕಾರಿಗಳು ಮತ್ತು ನೌಕರರಿಗೆ ಶನಿವಾರ ಮಂಗಳೂರಿನ ಕುಲಶೇಖರದ ಕೊರ್ಡೆಲ್ ಸಭಾಂಗಣದಲ್ಲಿ ಆಯೋಜಿಸಲಾದ ಅಭಿಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ಸೇವೆ ನಮ್ಮದು ಆಗಿರುವ ಕಾರಣಕ್ಕೆ ಯಾರೂ ಮೊಬೈಲ್ ಸ್ವಿಚ್ ಆಫ್ ಮಾಡಬೇಡಿ. ವಿದ್ಯುತ್ ಸಮಸ್ಯೆ ಇದ್ದಾಗ ಯಾವ ಯಾವ ರೀತಿಯಲ್ಲಿ ಜನರ ಪ್ರತಿಕ್ರಿಯೆ ಇರುತ್ತದೆ ಎಂಬುದು ನನಗೆ ಗೊತ್ತು. ಅದನ್ನು ನಾನು ಅನುಭವಿಸಿದ್ದೇನೆ. ಇನ್ನೂ ಕೆಲವರು, ಕೆಲಸವೇ ಇಲ್ಲದವರು, ಕುಡಿದು ಸಂಜೆ ಕರೆ ಮಾಡಿ ಕಿರಿಕ್ ಮಾಡುವವರಿರುತ್ತಾರೆ. ಈ ಭಾಗದಿಂದ ಒಬ್ಬರು ಹಾಗೆಯೇ 6 ತಿಂಗಳ ವರೆಗೆ ಕರೆ ಮಾಡುತ್ತಿದ್ದರು. ಪಾಪ ಅವರಿಗೆ ಕೆಲಸವೇ ಅದು. ವಿರೋಧ ಪಕ್ಷದವರು ಅದರ ಬಗ್ಗೆ ದೊಡ್ಡದಾಗಿ ಬೊಬ್ಬೆ ಹಾಕಿದರು. ಅವರಿಗೆ ಇದೇ ರೀತಿ ಕಿರಿಕ್ ಮಾಡುತ್ತಿದ್ದರೆ ಸುಮ್ಮನಿರುತ್ತಿದ್ದರಾ ? ವಿಧಿ ಇಲ್ಲದೆ ಕ್ರಮ ಕೈಗೊಂಡಿದ್ದೆ. ಆ ಬಗ್ಗೆ ಈಗ ಉತ್ತರಿಸುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಸುಳ್ಯ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖೀಸಿ ಹೇಳಿದರು.