ಮಂಗಳೂರು: ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಜು. 15ರಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ಮಂಗಳೂರು ವಿಭಾಗದ ಅಧಿಕಾರಿಗಳಿಂದ ಬಂಧನಕ್ಕೊಳಗಾದ ಜೆಟ್ ವಿಮಾನದ ಸಿಬಂದಿಗಳಾದ ಮಹಮದ್ ಅನೀಫ್ (ಸಿನಿಯರ್ ಸಿಎಸ್ಇ, ಏರ್ಪೋರ್ಟ್ ಸರ್ವೀಸಸ್) ಮತ್ತು ಒ.ಎ. ಮುದ್ದಯ್ಯ (ಸೆಕ್ಯುರಿಟಿ ಆಫೀಸರ್) ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಜೆಟ್ ಕಂಪೆನಿಯ ಪ್ರಕಟನೆ ತಿಳಿಸಿದೆ.
ಈ ಇಬ್ಬರು ಸಿಬಂದಿಗಳನ್ನು ಇಲಾಖಾ ವಿಚಾರಣೆ ಮತ್ತು ತನಿಖೆ ಕಾದಿರಿಸಿ ತತ್ಕ್ಷಣದಿಂದ ಜಾರಿಗೆ ಬರುವಂತೆ ಕಂಪೆನಿ ಅಮಾನತು ಮಾಡಿದೆ. ತನಿಖಾ ಪ್ರಕ್ರಿಯೆ ಸರಿಯಾದ ಮಾರ್ಗದಲ್ಲಿಯೇ ನಡೆಯುವಂತೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಪ್ರಕಟನೆ ವಿವರಿಸಿದೆ.ಸಿಬಂದಿಯ ಕರ್ತವ್ಯಲೋಪಗಳನ್ನು ಎಷ್ಟು ಮಾತ್ರಕ್ಕೂ ಕಂಪೆನಿ ಸಹಿಸುವುದಿಲ್ಲ. ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆಯಾಗಿ ಅಂತಹವರ ವಿರುದ್ಧ ಅಗತ್ಯ ಬಿದ್ದರೆ ಕಠಿನ ಕ್ರಮ ಜರಗಿಸಲಿದೆ ಎಂದು ಪ್ರಕಟನೆ ತಿಳಿಸಿದೆ.
ಆರೋಪಿಗಳಾದ ಮಂಗಳೂರಿನ ಮಹಮ್ಮದ್ ಅನೀಫ್ ಮತ್ತು ಕೊಡಗಿನ ಒ.ಎ. ಮುದ್ದಯ್ಯ ಜು. 15ರಂದು ಅಪರಾಹ್ನ 1.30ಕ್ಕೆ ಮಂಗಳೂರಿನಲ್ಲಿ ಬಂದಿಳಿದ ಜೆಟ್ ವಿಮಾನದಲ್ಲಿ 75,26,225 ರೂ. ಮೌಲ್ಯದ 2566.050 ಗ್ರಾಂ ತೂಕದ 22 ಚಿನ್ನದ ಬಿಸ್ಕತ್ತುಗಳನ್ನು ಸೀಟಿನ ಅಡಿ ಭಾಗದಲ್ಲಿ ಇರಿಸಿ ಅಕ್ರಮವಾಗಿ ಸಾಗಿಸಿದ್ದರು. ಡಿ.ಆರ್.ಐ. ಅಧಿಕಾರಿಗಳು ಇದನ್ನು ವಶ ಪಡಿಸಿಕೊಂಡಿದ್ದರು. ಈ ವಿಮಾನ ದುಬಾೖನಿಂದ ಮುಂಬಯಿ ಮಾರ್ಗವಾಗಿ ಮಂಗಳೂರಿಗೆ ಆಗಮಿಸಿತ್ತು.ಕಳ್ಳ ಸಾಗಾಟಗಾರರು ಈ ಚಿನ್ನವನ್ನು ದುಬಾೖನಿಂದ ಮುಂಬಯಿಗೆ ಬಾಡಿಗೆ ಬಂಟನ ಮೂಲಕ ಕಳುಹಿಸಿದ್ದು, ಅದನ್ನು ಈ ಇಬ್ಬರು ಆರೋಪಿಗಳು ಮುಂಬಯಿಯಿಂದ ಮಂಗಳೂರಿಗೆ ರವಾನಿಸಲು ಸಹಕರಿಸಿದ್ದರು. ಈ ಹಿಂದೆ ಆರೋಪಿಗಳು 6 ಬಾರಿ ಅಕ್ರಮ ಚಿನ್ನ ಸಾಗಾಟಗಾರರಿಗೆ ಸಹಾಯ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.