ಮಂಗಳೂರು: ದ.ಕ. ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ 6 ತಿಂಗಳಿನಲ್ಲಿ 530 ಅಪಘಾತ ಸಂಭವಿಸಿದರೆ 104 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಆತಂಕ ವ್ಯಕ್ತಪಡಿಸಿದ್ದಾರೆ.ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷಾ ಸಭೆಯಲ್ಲಿ ಅವರು ಬುಧವಾರ ಮಾತನಾಡಿದರು.ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2016ರ ಜನವರಿಯಿಂದ ಜೂನ್ 30ರ ವರೆಗೆ ಸಂಭವಿಸಿದ ಒಟ್ಟು 530 ಅಪಘಾತಗಳ ಪೈಕಿ 104 ಮಂದಿ ಪ್ರಾಣ ಕಳೆದುಕೊಂಡಿದ್ದು, 759 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.ಹೆದ್ದಾರಿಗಳಲ್ಲಿ ಸಂಚಾರ ಸೂಚನ ಫಲಕಗಳಿಲ್ಲದಿರುವುದು, ರಸ್ತೆ ಸುರಕ್ಷಾ ನಿಯಮ ಪಾಲಿಸದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಸಂಚಾರ ಸುರಕ್ಷಾ ಸಾಧನಗಳನ್ನು ವ್ಯವಸ್ಥೆ ಮಾಡುವ ಮೂಲಕ ಅಪಘಾತ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಅವರು ಮನವಿ ಮಾಡಿದರು.
ಅಪಘಾತಗಳ ವಿವರ
2011ರಲ್ಲಿ 750 ರಸ್ತೆ ಅಪಘಾತ ನಡೆದಿದ್ದು, 118 ಮಂದಿ ಮೃತಪಟ್ಟು 1,196 ಮಂದಿ ಗಾಯಗೊಂಡಿದ್ದಾರೆ. 2012ರಲ್ಲಿ 828 ರಸ್ತೆ ಅಪಘಾತಗಳಲ್ಲಿ 117 ಮಂದಿ ಮೃತಪಟ್ಟು, 1,338 ಮಂದಿ ಗಾಯಗೊಂಡಿದ್ದಾರೆ. 2013ರಲ್ಲಿ 891 ರಸ್ತೆ ಅಪಘಾತಗಳಲ್ಲಿ 147 ಮಂದಿ ಮೃತರಾಗಿ, 1,318 ಮಂದಿ ಗಾಯಗೊಂಡಿದ್ದಾರೆ. 2014ರಲ್ಲಿ 957 ಅಪಘಾತಗಳು ನಡೆದಿದ್ದು, 148 ಮಂದಿ ಮೃತಪಟ್ಟು, 1,336 ಮಂದಿ ಗಾಯಗೊಂಡಿದ್ದಾರೆ. 2015ರಲ್ಲಿ 959 ರಸ್ತೆ ಅಪಘಾತಗಳು ನಡೆದಿದ್ದು, 169 ಮೃತಪಟ್ಟು, 1,271 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.