ಮಂಗಳೂರು: ಮಂಗಳೂರಿಗೆ ನೀರು ಒದಗಿಸುವ ಎರಡನೇ ವೆಂಟೆಡ್ ಡ್ಯಾಂ ನಿರ್ಮಾಣ ಕಾಮಗಾರಿ ಈಗಾಗಲೇ ಪೂರ್ಣಗೊಳ್ಳುತ್ತ ಬಂದಿದ್ದು, ನೂತನ ಡ್ಯಾಂನಲ್ಲಿ 5 ಮೀಟರ್ ನೀರು ನಿಲುಗಡೆ ಮಾಡಬೇಕಾದರೆ ಹತ್ತಿರದ 53 ಎಕರೆ ಭೂಮಿ ಮುಳುಗಡೆಯಾಗಬಹುದು.
ಹೀಗಾಗಿ ಶೀಘ್ರದಲ್ಲಿ ಸಚಿವ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಆ ಭಾಗದ ರೈತರ ಸಭೆ ನಡೆಸಲಾಗುವುದು ಎಂದು ಮಂಗಳೂರು ಮೇಯರ್ ಎಂ. ಹರಿನಾಥ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.6 ಮೀಟರ್ ನೀರು ನಿಲುಗಡೆ ಮಾಡಿದರೆ ಸುಮಾರು 140 ಎಕರೆ ಭೂಮಿ ಬೇಕಾಗಬಹುದು. ಮುಳುಗಡೆ ಆಗುವ ಸ್ಥಳದ ಕುರಿತು ಗಡಿಗುರುತು ಮಾಡಲಾಗಿದೆ ಎಂದು ಅವರು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪುರಭವನದಲ್ಲಿ 99 ಲಕ್ಷ ರೂ. ವೆಚ್ಚದಲ್ಲಿ ನೂತನ ಭೋಜನ ಗೃಹ, 1 ಕೋಟಿ ರೂ. ವೆಚ್ಚದಲ್ಲಿ ಅಳಕೆ ಮಾರುಕಟ್ಟೆ ನಿರ್ಮಾಣ, ಕಾವೂರಿನಲ್ಲಿ 1 ಕೋ.ರೂ. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣ ಹಾಗೂ 1.5 ಕೋ.ರೂ. ವೆಚ್ಚದಲ್ಲಿ ಕಾವೂರು ಜಂಕ್ಷನ್ ಅಭಿವೃದ್ಧಿಗೆ ಶಿಲಾನ್ಯಾಸ, 45ನೇ ಬಂದರು-ಕಸಬಾ ಬಜಾರ್ನಲ್ಲಿ ನಿರ್ಮಿಸಿರುವ ರಾತ್ರಿ ವಸತಿರಹಿತ ನಾಗರಿಕರಿಗೆ ಸ್ನೇಹಿ ವಸತಿ ವ್ಯವಸ್ಥೆ ಉದ್ಘಾಟನೆ ಜು. 24ರಂದು ನಡೆಯಲಿದೆ ಎಂದು ಹೇಳಿದ್ದಾರೆ.