ಮಂಗಳೂರು: ಕೆಎಸ್ಸಾರ್ಟಿಸಿ ಬಸ್ ನೌಕರರ ಮುಷ್ಕರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಸರಕಾರಿ ಬಸ್ಸುಗಳು ರಸ್ತೆಗಿಳಿಯಲಿಲ್ಲ. ಮಂಗಳೂರು ನಗರ ಮತ್ತು ಹೊರ ವಲಯದಲ್ಲಿ ಸಾಕಷ್ಟು ಖಾಸಗಿ ಬಸ್ಸು ಮತ್ತು ಇತರ ವಾಹನಗಳ ಓಡಾಟ ಇದ್ದ ಕಾರಣ ಸರಕಾರಿ ಬಸ್ ನೌಕರರ ಮುಷ್ಕರದ ಪರಿಣಾಮ ಹೆಚ್ಚೇನೂ ತಟ್ಟಿಲ್ಲ; ಜನ ಜೀವನ ಎಂದಿನಂತೆ ಇತ್ತು.ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಇತರ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಎಂದಿನಂತೆ ಹಾಜರಾಗಿದ್ದಾರೆ.ಸರಕಾರಿ ಬಸ್ಸುಗಳು ಅಧಿಕ ಸಂಖ್ಯೆಯಲ್ಲಿ ಓಡಾಡುವ ಪುತ್ತೂರು, ಬೆಳ್ತಂಗಡಿ, ಬಿ.ಸಿ. ರೋಡ್ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಒಂದಿಷ್ಟು ಅನನುಕೂಲ ಆಗಿರುವುದನ್ನು ಬಿಟ್ಟರೆ ಬೇರೆ ಯಾರಿಗೂ ಸಮಸ್ಯೆ ಉಂಟಾಗಿಲ್ಲ.ಬಿ.ಸಿ. ರೋಡ್, ಪುತ್ತೂರು, ಬಂಟ್ವಾಳ ಮಾರ್ಗಗಳಲ್ಲಿ ಖಾಸಗಿ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸುಗಳು ಇದ್ದು, ಈ ಬಸ್ಸುಗಳಲ್ಲಿ ಪ್ರಯಾಣಿಕರ ಒತ್ತಡ ಜಾಸ್ತಿ ಇತ್ತು. ಬಿಜೈ ಬಸ್ ನಿಲ್ದಾಣದಲ್ಲಿ ಪೊಲೀಸರು ಕಾವಲು ವ್ಯವಸ್ಥೆ ಮಾಡಿದ್ದರು.ಪ್ರಸಿದ್ಧ ಯಾತ್ರಾ ಸ್ಥಳವಾದ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯದಲ್ಲಿ ಯಾತ್ರಿಗಳ ಸಂಖ್ಯೆ ಕಡಿಮೆಯಾಗಿತ್ತು.ಮಂಗಳೂರಿನಲ್ಲಿ 403 ಖಾಸಗಿ ಸಿಟಿ ಬಸ್ಸುಗಳಿವೆ. ಅಲ್ಲದೆ ಮಂಗಳೂರು ಸಂಪರ್ಕಿಸುವ ಸುಮಾರು 800ರಷ್ಟು ಖಾಸಗಿ ಸರ್ವೀಸ್ ಮತ್ತು ಎಕ್ಸ್ಪ್ರಸ್ ಬಸ್ಸುಗಳಿವೆ.
ಮಂಗಳೂರು ವಿಭಾಗದಲ್ಲಿ ಕೆಎಸ್ಸಾರ್ಟಿಸಿಯ 550 ಬಸ್ಸುಗಳು ಹಾಗೂ ಪುತ್ತೂರು ವಿಭಾಗದಲ್ಲಿ 600 ಬಸ್ಸುಗಳಿವೆ. ಮುಷ್ಕರದಿಂದ ಮಂಗಳೂರು ವಿಭಾಗಕ್ಕೆ ಸುಮಾರು 40 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರು ತಾಲೂಕುಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಖಾಸಗಿ ಬಸ್ಸು ಓಡಿಸಲು ವ್ಯವಸ್ಥೆ ಮಾಡಲಾಗಿತ್ತು ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ. ಎಲ್ಲಿಯೂ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.