ಮಂಗಳೂರು: ಪಿಲಿಕುಳದ ಡಾ| ಶಿವರಾಮ ಕಾರಂತ ನಿಸರ್ಗಧಾಮದ ಲೇಕ್ ಗಾರ್ಡನ್ನಲ್ಲಿ ನಿರ್ಮಿಸಲಾಗಿರುವ ಮಿನಿ ಐಫೆಲ್ ಟವರ್ ಹಾಗೂ ಜೈವಿಕ ಮಾಹಿತಿ ಕೇಂದ್ರವನ್ನು ಅರಣ್ಯ, ಪರಿಸರ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಬುಧವಾರ ಅನಾವರಣಗೊಳಿಸಿದರು.ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್ನಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಮಿನಿ ಐಫೆಲ್ ಟವರ್ ನಿರ್ಮಾಣವಾಗಿದೆ. ಪ್ಯಾರಿಸ್ನಲ್ಲಿರುವ ಐಫೆಲ್ ಟವರ್ನ ಮಾದರಿ ಹೋಲುವ ಸುಮಾರು 50 ಅಡಿ ಎತ್ತರದ ಕಬ್ಬಿಣದ ಮಾದರಿ ಇದಾಗಿದೆ.ಪಿಲಿಕುಳದಲ್ಲಿ ಮುಂದಿನ ಹಂತದಲ್ಲಿ ದೇಶದ ಅತ್ಯದ್ಬುತ ರಚನೆಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ನ ಮಾದರಿ ನಿರ್ಮಾಣವಾಗಲಿದೆ. ಇದರೊಂದಿಗೆ ಕುತುಬ್ ಮಿನಾರ್, ಎಲ್ಲೋರಾ, ಹಂಪಿಯ ಆಕರ್ಷಕ ರಥ, ಮಥುರೆ ದೇವಸ್ಥಾನದ ಮಾದರಿಗಳು ಇಲ್ಲಿ ಶೀಘ್ರದಲ್ಲೇ ತಲೆ ಎತ್ತಲಿವೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದರು.
ಇದೇ ಸಂದರ್ಭ ಸಚಿವ ರಮಾನಾಥ ರೈ ಅವರು ಪಿಲಿಕುಳದ ಮೃಗಾಲಯದ ಒಳಗೆ ಹಿಂದೂಸ್ಥಾನ್ ಪೆಟ್ರೋಲಿಯಂ ಲಿಮಿಟೆಡ್ (ಎಚ್ಪಿಸಿಎಲ್) ಪ್ರಾಯೋಜಿತ 28 ಲಕ್ಷ ರೂ.ಗಳಲ್ಲಿ ನಿರ್ಮಾಣವಾಗಿರುವ ಜೈವಿಕ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು.ಪಿಲಿಕುಳಕ್ಕೆ ಬರುವ ವಿದ್ಯಾರ್ಥಿಗಳು, ಶಿಕ್ಷಕರಿಗೆ ಅನುಕೂಲವಾಗುವಂತೆ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ನಡೆಸಲು ಈ ಕೇಂದ್ರ ಬಳಕೆಯಾಗಲಿದೆ.ಈ ಸಂದರ್ಭ ವಿಧಾನ ಪರಿಷತ್ನ ಮುಖ್ಯ ಸಚೇತಕ ಐವನ್ ಡಿ'ಸೋಜಾ, ಎಚ್ಪಿಸಿಎಲ್ನ ಮುಖ್ಯ ವ್ಯವಸ್ಥಾಪಕ ರಾಕೇಶ್ ಅಗರ್ವಾಲ್, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್ ಮೊದಲಾದವರು ಉಪಸ್ಥಿತರಿದ್ದರು.