ಮಂಗಳೂರು: ಶಾಲೆಯಲ್ಲಿ ಒತ್ತಾಯಪೂರ್ವಕವಾಗಿ ಉರ್ದು ಮತ್ತು ಅರೆಬಿಕ್ ಭಾಷೆಗಳನ್ನು ಕಲಿಸಲಾಗುತ್ತದೆ ಎಂದು ಆರೋಪಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ಮಂಗಳೂರು ಹೊರವಲಯದ ನೀರುಮಾರ್ಗ ಸಮೀಪದ ಬೊಂಡಂತಿಲ ಎಂಬಲ್ಲಿರುವ ಖಾಸಗಿ ಶಾಲೆಗೆ ದಾಳಿ ನಡೆಸಿದ್ದಾರೆ.
ಪಡು ಬೊಂಡಂತಿಲದಲ್ಲಿರುವ ಸೈಂಟ್ ಥೋಮಸ್ರ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಪ್ರತಿ ಶನಿವಾರ ಅರೆಬಿಕ್ ಭಾಷೆ ಮತ್ತು ಇತರ ಭಾಷಾ ಶಿಕ್ಷಣವನ್ನು ನೀಡಲಾಗುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀರಾಮ ಸೇನೆಯ 50ರಿಂದ 60 ಕಾರ್ಯಕರ್ತರು ಇಂದು ಬೆಳಿಗ್ಗೆ ಶಾಲೆಗೆ ನುಗ್ಗಿ ಅರೆಬಿಕ್ ಭಾಷೆಯನ್ನು ಕಲಿಸದಂತೆ ಆಗ್ರಹಿಸಿದ್ದಾರೆ.
ಜೊತೆಗೆ ಮುಖ್ಯೋಪಾಧ್ಯಾಯರ ಬಳಿಯೂ ಅರೆಬಿಕ್ ಭಾಷೆಯನ್ನು ಕಲಿಸದಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ತರಗತಿ ನಡೆಯುತ್ತಿದ್ದ ವೇಳೆ ಚಿತ್ರೀಕರಣ ಮಾಡಿ ಪುಸ್ತಕಗಳನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲಾ ಮುಖ್ಯೋಪಾಧ್ಯಾಯ ಮೆಲ್ವಿನ್ ಅವರು , ಕಳೆದ 2 ವರ್ಷಗಳಿಂದ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಫ್ರೆಂಚ್, ಜರ್ಮನಿ, ಅರೆಬಿಕ್ ಮತ್ತು ಕರಾಟೆ ತರಗತಿಗಳನ್ನು ನಡೆಸುತ್ತಿದ್ದೇವೆ.
ಇದಕ್ಕೆ ಆಸಕ್ತ ವಿದ್ಯಾರ್ಥಿಗಳು ಮಾತ್ರ ಸೇರಬಹುದಾಗಿದೆ. ಇದಕ್ಕಾಗಿ ನಾವು ವಿದ್ಯಾರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕ ವಸೂಲಿ ಮಾಡಿಲ್ಲ. ಯಾರನ್ನೂ ಒತ್ತಾಯಪೂರ್ವಕವಾಗಿ ಸೇರಿಸಿಲ್ಲ. 59 ವಿದ್ಯಾರ್ಥಿಗಳ ಪೈಕಿ 40 ವಿದ್ಯಾರ್ಥಿಗಳು ಈ ತರಗತಿಗಳಿಗೆ ಸೇರಿದ್ದಾರೆ. ಈವರೆಗೆ ನಾವು ಉರ್ದು ಭಾಷಾ ತರಗತಿಗಳನ್ನು ನಡೆಸಿಲ್ಲ.ದಾಳಿ ಮಾಡಿರುವ ಕಾರ್ಯಕರ್ತರು ಉರ್ದು ಮತ್ತು ಅರೆಬಿಕ್ ಕಲಿಸದಂತೆ ಒತ್ತಡ ಹೇರಿದ್ದಾರೆ ಎಂದು ಹೇಳಿದ್ದಾರೆ.
ಮೂವರ ಬಂಧನ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶ್ರೀ ರಾಮ ಸೇನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.ಪೊಲೀಸರು ವಶಕ್ಕೆ ಪಡೆದವರನ್ನು ನಿತಿನ್, ದಿನೇಶ್, ಸಂತೋಷ್ ಎಂದು ಗುರುತಿಸಲಾಗಿದೆ. ಜುಲೈ ೩೦ರಂದು ಎಂದಿನಂತೆ ತರಗತಿ ನಡೆಸುತ್ತಿದಾಗಲೇ ಏಕಾಏಕಿ 30ಕ್ಕೂ ಮಿಕ್ಕಿ ಶ್ರೀ ರಾಮಸೇನೆ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ದ್ದರು. ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಪೊಲೀಸರು ಮೂವರು ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಬಂಧಿಸಿದ್ಡಾರೆ.