ಉದ್ಯಮಶೀಲರಿಂದಲೇ ಸಮಾಜದ ಬಲಿಷ್ಠತೆ: ಎನ್.ಟಿ ಪೂಜಾರಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಉಡುಪಿ (ಪಡುಬಿದ್ರಿ),: ನನ್ನ ಪಾಲಿಗೆ ಇದೊಂದು ಅನಿವಾರ್ಯ ಮತ್ತು ಆಶ್ಚರ್ಯಕರ ಅವಕಾಶವಾಗಿದೆ. ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಸಂಸ್ಥೆಯು ನಮ್ಮಲ್ಲಿನ ಒಗ್ಗಟ್ಟಿನ ಶಕ್ತಿಕೇಂದ್ರÀವಾಗಿದೆ. ಯಾರಲ್ಲಿ ಎನೋ ಬಿಕ್ಕಟ್ಟು ಇದ್ದರೂ ನಮ್ಮಲ್ಲಿನ ಏಕತೆಗಾಗಿ ಇವನ್ನುಬಿಟ್ಟು ಸಮುದಾಯವನ್ನು ಕಟ್ಟುವ ಅವಶ್ಯಕತೆ ನಮಗಿದೆ. ಇಂದು ರಾಜಕೀಯ, ಉದ್ಯಮಶೀಲರಿಂದಲೇ ಸಮಾಜದ ಬಲಿಷ್ಠತೆ ಆಗಿದ್ದು ಈ ಶಕ್ತಿಯನ್ನು ಬಲಪಡಿಸುವಲ್ಲಿ ನಾವುಗಳು ಸನ್ನದ್ಧರಾಗಬೇಕು. ಉದ್ಯೋಗಸ್ಥರ ಬಲ, ಬೆಂಬಲದಿಂದ ಸಮುದಾಯಕ್ಕೆ ಸಾಂಘಿಕಶಕ್ತಿ ಪ್ರಾಪ್ತಿಯಾಗಲಿದ್ದು ಆ ನಿಟ್ಟಿನಲ್ಲಿ ರೂಪಿಸಲಲ್ಪಟ್ಟ ಬಿಸಿಸಿಐ ಸಂಸ್ಥೆಯ ಘಟಕವನ್ನು ಶೀಘ್ರವೇ ಮಂಗಳೂರುನಲ್ಲಿ ತೆರೆಯಲಾಗುವುದು ಎಂದು ಬಿಲ್ಲವ ಜಾಗೃತಿ ಬಳಗ ಮುಂಬಯಿ ಸಂಚಾಲಿತ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ (ಬಿಸಿಸಿಐ) ಸಂಸ್ಥೆಯ ಕಾರ್ಯಾದ್ಯಕ್ಷ ಎನ್.ಟಿ ಪೂಜಾರಿ ತಿಳಿಸಿದರು.
ಇಂದಿಲ್ಲಿ ಆದಿತ್ಯವಾರ ಸಂಜೆ ಎರ್ಮಾಳು ಸೀತರಾಮಪ್ಪ ಸ್ಮಾರಕ ಸಭಾ ಭವನದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) (ಪಿಬಿಎಸೆಸ್) ಆಯೋಜಿಸಿದ್ದ ಸರಳ ಸನ್ಮಾನ ಸಮಾರಂಭವನ್ನುದ್ದೇಶಿಸಿ ಎನ್.ಟಿ ಪೂಜಾರಿ ಮಾತನಾಡಿದರು.
ಬಿಲ್ಲವ ಸೇವಾ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್ ಅವರು ಪದಾಧಿಕಾರಿಗಳನ್ನೊಳಗೊಂಡು ಎನ್.ಟಿ ಪೂಜಾರಿ ಅವರಿಗೆ ಸ್ಮರಣಿಕೆ, ಪುಷ್ಪಗುಪ್ಛವನ್ನಿತ್ತು ಶಾಲು ಹೊದಿಸಿ ಸನ್ಮಾನಿಸಿದರು.
ಸುಧೀರ್ ಕುಮಾರ್ ಮಾತನಾಡಿ ಬಿಸಿಸಿಐ ವಿಚಾರವಾಗಿ ಸ್ಥೂಲವಾದ ಮಾಹಿತಿಯನ್ನಿತ್ತು, ಇದೊಂದು ಬಿಲ್ಲವ ಸಮುದಾಯದ ಉದ್ಯಮಸ್ಥರ ಏಕೈಕ ಸಂಸ್ಥೆಯಾಗಿದೆ. ಯಾವುದೇ ಸಮಾಜದಲ್ಲಿ ಉದ್ಯಮಿಗಳು ಬೆಳೆದಾಗ ಆಯಾ ಸಮುದಾಯಗಳ ಉದ್ಧಾರ ಸುಲಭ ಸಾಧ್ಯವಾಗುವುದು. ನಮ್ಮಲ್ಲಿನ ಏಕತೆ, ಯುವ ಉದ್ಯಮಿಗಳ ಬೆಳವಣಿಗೆಯ ಹಿತಕ್ಕಾಗಿ ಶ್ರಮಿಸಿ ಆ ಮೂಲಕ ಸಮುದಾಯದ ಸಾಂಘಿಕತೆಗಾಗಿ ರೂಪಿಸಲ್ಪಟ್ಟ ಇಂತಹ ಸಂಸ್ಥೆ ಉಜ್ವಲವಾಗಿ ಬೆಳೆಯಲಿ ಎಂದರು.
ಆ ಮುನ್ನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಪೂಜೆ ಸಲ್ಲಿಸಲಾಯಿತು. ಕಾರ್ಯದರ್ಶಿ ಲಕ್ಷ್ಮಣ ಅಮೀನ್, ಕೋಶಾಧಿಕಾರಿ ಅಶೋಕ್ ಪೂಜಾರಿ, ಮಹಿಳಾ ವಿಭಾಗಧ್ಯಕ್ಷೆ ಸರೋಜಿನಿ ಅಂಚನ್ ಹಾಗೂ ಬಿಸಿಸಿಐ ನಿರ್ದೇಶಕ ಪುರುಷೋತ್ತಮ ಎಸ್.ಪೂಜಾರಿ ವೇದಿಕೆಯಲ್ಲಿ ಆಸೀನರಾಗಿದ್ದರು. ಲಕ್ಷ್ಮಣ ಅಮೀನ್ ಸ್ವಾಗತಿಸಿದರು. ಅಶೋಕ್ ಪೂಜಾರಿ ವಂದಿಸಿದರು.