ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅವರಿಗೆ ಚೆನ್ನೈನ ದ್ರಾವಿಡ ಬ್ರಾಹ್ಮಣ ಎಸೋಸಿಯೇಶನ್ “ವಿಪ್ರ ಸಮಾಜದ ಜೀವಮಾನ ಸಾಧನಾ ಪ್ರಶಸ್ತಿ” ಘೋಷಿಸಿದೆ. ಸಾಮಾಜಿಕ ಹಾಗೂ ಸಾಂಸ್ಕøತಿಕ ವಲಯದಲ್ಲಿ ಸಕ್ರಿಯರಾಗಿರುವ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ಬ್ರಾಹ್ಮಣ ಒಕ್ಕೂಟದ ಆಶ್ರಯದಲ್ಲಿ ಈ ಹಿಂದೆ ಬ್ರಾಹ್ಮಣ ಸಮ್ಮೇಳನವು ಯಶಸ್ವಿಯಾಗಿ ಜರಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರೋಜೆಕ್ಟ್ ಇದರ ವತಿಯಿಂದ “ಪುರಂದರಾನುಗ್ರಹ” ಪುರಸ್ಕಾರ, ಉಡುಪಿ ಶ್ರೀಕೃಷ್ಣ ಮಠದಲ್ಲಿ “ಕೃಷ್ಣಾನುಗ್ರº” ಪ್ರಶಸ್ತಿ ಸಹಿತ ಇನ್ನೂ ನೂರಾರು ಪುರಸ್ಕಾರಗಳಿಂದ ಸನ್ಮಾನಿತರಾಗಿರುವ ಕಲ್ಕೂರ ಅವರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸತತ ಮೂರನೇ ಬಾರಿ ಆಯ್ಕೆಗೊಂಡ ಸಂದರ್ಭ ನಗರದ ಪುರಭವನದಲ್ಲಿ ‘ಸಾರ್ವಜನಿಕ ಅಭಿನಂದನೆ’ಗೂ ಪಾತ್ರರಾಗಿದ್ದರು. ಪ್ರಸ್ತುತ ಸತತ ಐದನೇ ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಸೇವೆಗೈಯ್ಯುತ್ತಿದ್ದಾರೆ.
ಇತ್ತೀಚೆಗೆ ಉಡುಪಿ ಪೇಜಾವರ ಮಠದಲ್ಲಿ ಪೇಜಾವರ ಶ್ರೀಗಳ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಆಗಸ್ಟ್ 7ನೇ ಭಾನುವಾರ ಸಂಜೆ ಚೆನ್ನೈನ ರಾಧಾಕೃಷ್ಣ ಸಲಾೈ (ರಸ್ತೆ)ಯಲ್ಲಿರುವ ವುಡ್ಲ್ಯಾಂಡ್ಸ್ ಸಭಾಂಗಣದಲ್ಲಿ ಜರಗಲಿರುವ ಸಮಾರಂಭದಲ್ಲಿ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರಕಟಣೆ ತಿಳಿಸಿದೆ.