ಮಂಗಳೂರು: ಸು.ಕೋರ್ಟ್ನ ಹಸಿರು ಪೀಠದ ಪ್ರಧಾನ ಪೀಠದಲ್ಲಿ ಮಂಗಳವಾರ ಎತ್ತಿನಹೊಳೆ ಅರ್ಜಿ ವಿಚಾರಣೆ ನಡೆದು ಅಂತಿಮ ವಾದವನ್ನು ಸೆ. 21ರಂದು ಆಲಿಸುವುದಾಗಿ ನ್ಯಾಯಾಧೀಶರು ಮುಂದೂಡಿದ್ದಾರೆ.
ಪರಿಸರ ಹೋರಾಟಗಾರ ಕೆ.ಎನ್. ಸೋಮಶೇಖರ್, ತುಮಕೂರಿನ ಯತಿರಾಜು ಅವರು ಕರ್ನಾಟಕ ನೀರಾವರಿ ನಿಗಮದ ಎತ್ತಿನಹೊಳೆ ಯೋಜನೆ ವಿರುದ್ಧ ಸಲ್ಲಿಸಿದ ಅರ್ಜಿ ವಿಚಾರಣೆಗೆ ನ್ಯಾ| ಸ್ವತಂತ್ರಕುಮಾರ್ ಅಧ್ಯಕ್ಷತೆಯ ಪ್ರಧಾನ ಪೀಠಕ್ಕೆ ಸೋಮವಾರ ಬಂದಿತ್ತು. ಈ ಸಂದರ್ಭ ಮತ್ತೆ ಕರ್ನಾಟಕ ನೀರಾವರಿ ನಿಗಮ, ಕರ್ನಾಟಕ ಸರಕಾರದ ವಕೀಲರು ಅರ್ಜಿಯನ್ನು ಚೆನ್ನೈ ಪೀಠಕ್ಕೆ ವರ್ಗಾಯಿಸಬೇಕೆಂದು ಮನವಿ ಮಾಡಿದ್ದರು. ಆದರೆ ಈಗಾಗಲೇ ಚೆನ್ನೈ ಪೀಠದಿಂದ ಅರ್ಜಿದಾರರ ಕೋರಿಕೆ ಮೇರೆಗೆ ದಿಲ್ಲಿಯ ಪ್ರಧಾನ ಪೀಠಕ್ಕೆ ಬಂದಿದ್ದು, ಮರಳಿ ಚೆನ್ನೈಗೆ ಕಳುಹಿಸುವುದು ಅಸಾಧ್ಯ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಜತೆಗೆ ವಾದ ಮಂಡಿಸುವಂತೆ ಸೂಚನೆ ನೀಡಿ ಮಂಗಳವಾರ ವಿಚಾರಣೆ ಮುಂದುವರಿಯಲಿದೆ ಎಂದಿದ್ದರು.ಅದರಂತೆ ಮಂಗಳವಾರ ವಿಚಾರಣೆ ನಡೆಯಿತು.