ಪಡುಬಿದ್ರಿ : ರೈತರ ಕೃಷಿ ಕ್ಷೇತ್ರದ ಕೆಸರು ಗದ್ದೆಯಲ್ಲಿ ನಡೆಯುವ ಗ್ರಾಮೀಣ ಜನಪದೀಯ ಕ್ರೀಡೆಗಳ ಮೂಲಕ ಯುವ ಪೀಳಿಗೆಗೆ ಒಗ್ಗಟ್ಟು ಮತ್ತು ಮಣ್ಣಿನ ಸಂಸ್ಕøತಿಯ ಪರಿಮಳ ಪಸರಿಸುವಲ್ಲಿ ಈ ಕೆಸರು ಗದ್ದೆ ಕ್ರೀಡಾಕೂಟ ಮಾದರಿಯಾಗಲಿದೆ ಎಂದು ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ಶೆಟ್ಟಿ ಹೇಳಿದರು.
ಅವರು ಭಾನುವಾರ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ಯುವಕ ಮತ್ತು ಯುವತಿ ವೃಂದವು ಜಂಟಿಯಾಗಿ ಶ್ರೀ ದೇವಳದ ಪರಿಸರದ ರಾಘವೇಂದ್ರ ಆಚಾರ್ಯರ ಗದ್ದೆಯಲ್ಲಿ ಆಯೋಜಿಸಿದ್ದ ಕೆರಮೊಡು ಕೆಸರ್ದ ಗೊಬ್ಬು ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಅವರು ತೆಂಗಿನ ಸಿರಿ ಅರಳಿಸಿದರು. ಯುವತಿ ವೃಂದದ ಪದಾಧಿಕಾರಿಗಳು ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ ಚಾಲನೆ ನೀಡಿದರು. ಸುಬ್ರಹ್ಮಣ್ಯ ಯುವಕ ವೃಂದದ ಅಧ್ಯಕ್ಷ ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಗ್ರಾ.ಪಂ. ಸದಸ್ಯ ರವಿ ಶೆಟ್ಟಿ ಮಾತನಾಡಿ, ನಮ್ಮ ಹಿರಿಯರು ಈ ಕೆಸರು ಗದ್ದೆಗಾಗಿಯೇ ಮುಡಿಪಾಗಿದ್ದರು. ಅಂತಹ ನಮ್ಮ ತುಳು ಸಂಸ್ಕøತಿಯ ಕೆಸರು ಗದ್ದೆಯ ಕ್ರೀಡಾಕೂಟ ಮಹತ್ವವುಳ್ಳದಾಗಿದೆ ಎಂದರು.
ಉದ್ಯಮಿ ವಿನಯ ಕೆ. ಶೆಟ್ಟಿ, ಶಶಿಕಲಾವಿಶ್ವನಾಥ ಶೆಟ್ಟಿ, ಶ್ರೀ ಧೂಮಾವತಿ ದೈವಸ್ಥಾನದ ಅರ್ಚಕ ಸದಾನಂದ ಪೂಜಾರಿ, ಯುವಕ ವೃಂದದ ಗೌರವಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಕಾರ್ಯದರ್ಶಿ ಸುರೇಶ ಪೂಜಾರಿ, ಯುವತಿ ವೃಂದದ ಅಧ್ಯಕ್ಷೆ ಹೇಮಾವತಿಪ್ರಕಾಶ, ಕಾರ್ಯದರ್ಶಿ ಸೌಮ್ಯ ಆಚಾರ್ಯ ವೇದಿಕೆಯಲ್ಲಿದ್ದರು.
ಸಚಿನ್ ಆಚಾರ್ಯ ಸ್ವಾಗತಿಸಿದರು. ಗೋಪಾಲಕೃಷ್ಣ ಉಳ್ಳೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಬಾಕ್ಸ್ : ಸುಬ್ರಹ್ಮಣ್ಯ ಯುವಕ, ಯುವತಿ ಮಂಡಳಗಳು ಸಮಾಜಕ್ಕೆ ಬೆನ್ನೆಲುಬಾಗಿ ನಿಲ್ಲುವ ಬಹಳಷ್ಟು ಕರ್ತವ್ಯವನ್ನು ನಿಭಾಯಿಸಿದೆ. ಶಿಸ್ತಿನ ಸಂಘಟನೆಯ ಮೂಲಕ ಧಾರ್ಮಿಕ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಕೆಲಸಗಳಿಗೆ ಕೈಜೋಡಿಸುವ ಮೂಲಕ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ - ಪ್ರಕಾಶ್ ಶೆಟ್ಟಿ ಪಾದೆಬೆಟ್ಟು. ಸಂಸ್ಥೆಯ ಅಧ್ಯಕ್ಷ, ಬಿಜೆಪಿ ಕಾಪುಕ್ಷೇತ್ರಾಧ್ಯಕ್ಷ.