ಮಂಗಳೂರು: ಮೀನುಗಾರಿಕಾ ಇಲಾಖೆಯಲ್ಲಿ ನೋಂದಾಯಿಸದೆ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಯಾಂತ್ರೀಕೃತ ದೋಣಿಗಳನ್ನು ಸಕ್ರಮಗೊಳಿಸುವ ಅವಕಾಶವನ್ನು ರಾಜ್ಯ ಸರಕಾರ ಒದಗಿಸಿದ್ದು, ಮೀನುಗಾರರು, ದೋಣಿ ಮಾಲಕರು ಈ ಸದವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದು ಶಾಸಕ ಬಿ.ಎ. ಮೊದೀನ್ ಬಾವಾ ತಿಳಿಸಿದ್ದಾರೆ.ಮಂಗಳೂರಿನ ಕಚೇರಿಯಲ್ಲಿ ಸಕ್ರಮಗೊಂಡ ಬೋಟ್ ಮಾಲಕರಿಗೆ ಸಕ್ರಮೀಕರಣ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಯಾವುದೇ ರೀತಿಯಲ್ಲಿ ನೋಂದಣಿಯಾಗದ ಮೀನುಗಾರಿಕೆಯಲ್ಲಿ ತೊಡಗಿಕೊಂಡ ಬೋಟುಗಳಿಗೆ ಸರಕಾರದ ಡೀಸೆಲ್ ಸಬ್ಸಿಡಿ ಲಭ್ಯವಾಗುವುದಿಲ್ಲ.ಅಲ್ಲದೇ, ಬೋಟುಗಳು ಅವಘಡಕ್ಕೀಡಾದರೆ ಯಾವುದೇ ವಿಮಾ ಪರಿಹಾರವೂ ಸಿಗುವುದಿಲ್ಲ. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಈ ಹಿಂದೆ ತಾನು ಪ್ರಸ್ತಾಪಿಸಿದ್ದೆ. ಇದಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ಅಕ್ರಮ ಯಾಂತ್ರೀಕೃತ ದೋಣಿಗಳಿಗೆ ಸಕ್ರಮಗೊಳಿಸುವ ಅವಕಾಶ ನೀಡಿದೆ. ಕರಾವಳಿ ಮೀನುಗಾರರು, ಇದನ್ನು ಉಪಯೋಗಿಸಿ ದೋಣಿಗಳ ಸಕ್ರಮೀಕರಣಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.